ಒಂದು ಹುಚ್ಚನ ಕಥೆ


ಒಂದು ಹುಚ್ಚನ ಕಥೆ

ಸಂಜೆ ಆರು ಮುಕ್ಕಾಲು, ಏಳು ಗಂಟೆ ಹೊತ್ತು. ಗಿರಿಸಾಗರದಿಂದ ಬರೊ ಕೊನೆ ಬಸ್ಸು ಈಗಷ್ಟೆ ಮಂಜಿನಕೊಪ್ಪ ಬಸ್ ಸ್ಟಾಪ್ ಬಂದು ತಲುಪಿತ್ತು. ಮಂಜಿನ ಕೊಪ್ಪಕ್ಕೆ ಹತ್ತಿರದಲ್ಲಿರೋ ದೊಡ್ಡ ಪಟ್ಟಣ ಅಂದ್ರೆ ಗಿರಿಸಾಗರ. ದೊಡ್ಡ ಪಟ್ಟಣ ಅಂದ್ರೆ ಮಂಜಿಕೊಪ್ಪಕ್ಕಿಂತ ಸ್ವಲ್ಪ ದೊಡ್ಡದು ಅಷ್ಟೆ. ಅದು ಅವತ್ತಿನ ಕೊನೆ ಬಸ್. ಕೊನೆ ಬಸ್ ಆಗಿದ್ರಿಂದ ಜನಾನು ಹೆಚ್ಚು, ಅದರ ಜೊತೆಗೆ ದೊಡ್ಡ ದೊಡ್ಡ ತರಕಾರಿ ಚೀಲ, ಹೂವಿನ ಬುಟ್ಟಿ. ಕೊನೆ ಟ್ರಿಪ್ ಪ್ರಯಾಣ ಅಂದ್ರೆ ಸ್ವಲ್ಪ ಪ್ರಯಾಸಾನೆ ಸರಿ.
ಆದರೆ ಚಕ್ರಪಾಣಿಗೆ ಬೇರೆ ದಾರಿ ಇರ್ಲಿಲ್ಲ. ಅವನ ಮನೆ ಇರೋದು ಮಂಜಿನ ಕೊಪ್ಪದಲ್ಲಿ. ಅವನು ಅವನ ಅಮ್ಮ ಇಬ್ಬರೆ ಇರೋದ್ರಿಂದ ಅಮ್ಮನನ್ನ ಒಬ್ಬಳನ್ನೆ ಬಿಟ್ಟು ಇರೋ ಹಾಗಿಲ್ಲ. ಹಾಗಾಗಿ ಕೆಲಸಕ್ಕೆ ಮಂಜಿನಕೊಪ್ಪದಿಂದ ಗಿರಿಸಾಗರಕ್ಕೆ ದಿನಾ ಹೋಗೋದು ಬರೋದು ಮಾಡ್ತಾ ಇದ್ದ. ಅದೇನು ಜಾಸ್ತಿ ದೂರದ ಊರಲ್ಲ, ಅಲ್ಲಿಂದ ಗಿರಿಸಾಗರಕ್ಕೆ ಇದ್ದಿದ್ದು 17 ಕಿ.ಮಿ. ಅಷ್ಟೆ. ಆದ್ರೆ ಅಲ್ಲಿನ  ರಸ್ತೆಗಳೆ ದೊಡ್ಡ ಪ್ರಾಬ್ಲಮ್.

ಪ್ರತಿ ದಿನದ ಹಾಗೆ ಇವತ್ತು ಕೂಡ ಬಸ್ ನಿಂದ ಇಳಿದು ಮನೆಕಡೆ ಹೊರಟ, ಪೇಟೆಯಿಂದ ಅರ್ಧ-ಮುಕ್ಕಾಲು ಕಿ.ಮಿ. ನಡ್ಕೊಂಡು ಹೋಗೊ ಒಳದಾರಿ, ಪೇಟೆ ದಾರಿ ಮುಗಿಯುವ ಮೊದಲೇ ದಾರಿನಲ್ಲಿ ದುರ್ಗಾಪರಮೇಶ್ವರಿಯ ಚಿಕ್ಕ ದೇವಸ್ಥಾನ ಸಿಗುತ್ತೆ, ಪ್ರತೀದಿನ ಅದರ ಮುಂದೆ ನಿಂತು ಚಪ್ಪಲಿ ಬಿಚ್ಚಿ ನಮಸ್ಕಾರಮಾಡಿ ಮುಂದೆ ಹೋಗೊದು ಚಕ್ರಪಾಣಿ ಹವ್ಯಾಸ. ಮಂಗಳವಾರ ಶುಕ್ರವಾರ ಗಳನ್ನ ಬಿಟ್ಟ್ರೆ ಅಲ್ಲಿ ಜಾಸ್ತಿ ಜನಾ ಇರೊದಿಲ್ಲ. ಅವತ್ತು ಬುಧವಾರವಾದ್ದರಿಂದ ಗುಡಿಗೆ ತುಂಬಾ ಹತ್ರ ಹೋಗಿ ನಮಸ್ಕಾರಮಾಡ್ತಾ ಇದ್ದ. ಅಷ್ಟರಲ್ಲಿ  ಯಾರೋ ಇವನ್ನ ನೋಡಿ

“ನಮಸ್ಕಾರ ಸಾರ್”    ಅಂದಹಾಗಾಯ್ತು

ನಮಸ್ಕಾರ ಮಾಡ್ತಿದ್ದ ಚಕ್ರಪಾಣಿ ಕಣ್ಣು ಬಿಟ್ಟು ಆ ಕಡೆ ಈ ಕಡೆ ನೋಡಿದ,  ಗುಡಿಯ ಬಾಗಿಲಿನ ಪಕ್ಕದಲ್ಲೆ ಇದ್ದ ಖಾಲಿ ಜಾಗದಲ್ಲಿ ಒಂದು ಹರಿದಿರೊ ಚಾಪೆ ಹಾಕೊಂಡು ಯಾವನೋ ಒಬ್ಬ ಮಲಗಿದ್ದ. ಉದ್ದದ ಗಡ್ಡ, ಕತ್ತರಿ, ಬಾಚಣಿಕೆ ಕಾಣದೆ ಕೆದರಿರೋ ಉದ್ದದ ಕೂದಲು, ಅಂಗಿಯಂತು ಯಾವ ಬಣ್ಣ ಅಂತ ಹೇಳೊದು ಕಷ್ಟ, ಬೆಳ್ಳಗೆ ಫಂಗಸ್ ಹಿಡಿದು ಅಲ್ಲಲ್ಲಿ ಹರಿದು ಹೋದ ಜೀನ್ಸ್ ಪ್ಯಾಂಟ್. ಈ ಹಿಂದೆನು ಗುಡಿಪಕ್ಕದಲ್ಲಿ ಮಲಗಿರೋದು, ಅಗಾಗ ಏನೇನೊ ಮಾತನಾಡೊದು ಅದನ್ನೆಲ್ಲ ಚಕ್ರಪಾಣಿಯೂ ನೋಡಿದ್ದ, ಹುಚ್ಚ ಹುಚ್ಚ ಅಂತ ಮಕ್ಕಳು ಕೂಡ ಅವನನ್ನ ರೇಗಿಸ್ತಾ ಇರ್ಥಾರೆ. ಇವತ್ತು ಮಾತ್ರ ಅವನನ್ನ ತುಂಬಾ ಹತ್ತಿರದಿಂದ ನೋಡಿದ್ದ, ತಿರುಗಿ ನಮಸ್ಕಾರ ಮಾಡಬೇಕು ಅಂತ ಚಕ್ರಪಾಣಿಗೆ ಅನಿಸಲಿಲ್ಲ. ಹುಚ್ಚನ ಸಹವಾಸ ಯಾಕೆ ಅಂತ ಚಪ್ಪಲಿ ಹಾಕಿಕೊಂಡುಅ ಸುಮ್ಮನೆ ಮನೆ ದಾರಿ ಹಿಡಿದ.

ಯಾವಾಗಲೂ ತಂಪಗಿರೊ ಮಂಜಿನಕೊಪ್ಪದಲ್ಲಿ ಅವತ್ತು ಮಾಮೂಲಿಗಿಂತ ಥಂಡಿ ಜಾಸ್ತಿನೆ ಇತ್ತು. ಇವನಿಗೆ ನೆಗಡಿ ಆಗಿದ್ರಿಂದ ಗಂಟಲಲ್ಲಿ ಏನು ಕಿರಿ ಕಿರಿ ಅನ್ನಿಸ್ತಿತ್ತು. ಅವನು ಹೋಗ್ತಾ ಇದ್ದ ಬೀದಿ ಕೊನೆನಲ್ಲಿ ಒಂದು ಮೆಡಿಕಲ್ ಇದೆ. ಅದೇ ಕೊನೆ, ಆ ಮೆಡಿಕಲ್ ಗಿಂತ ಆಚೆ ಯಾವ ಅಂಗಡಿನೂ ಇಲ್ಲ. ಅದರಾಚೆಗೆ ಏನಿದ್ರು ತೋಟ ಎಸ್ಟೇಟ್ ಗಳು ಮಾತ್ರ. ಜನ ಸಂಚಾರ ಕಡಿಮೆ ಇರೋ ಪ್ರದೇಶ, ಎರಡು ಮೂರು ಮನೆಗಳು ದಾರಿ ಪಕ್ಕದಲ್ಲೇ ಇರೋದು ಬಿಟ್ರೆ. ಉಳಿದ ಮನೆಗಳೆಲ್ಲಾ ಎಲ್ಲೋ ತೋಟದ ಮಧ್ಯೆ ರಾತ್ರಿ ಲೈಟ್ ಉರಿಯೋದು ಕಾಣಿಸ್ತಾವೆ ಅಷ್ಟೆ.
ರಾತ್ರಿ ನೆಗಡಿ ಜೋರಾದ್ರೆ ಕಷ್ಟ ಅಂದುಕೊಂಡು ಸೀದ ಮೆಡಿಕಲ್ ಗೆ ಹೋಗಿ, ಮಾತ್ರೆ, ಗಂಟಲು ಕಿರಿಕಿರಿಗೆ ವಿಕ್ಸ್ ತೆಗೊಂಡು ಅಲ್ಲಿಂದ ಹೊರಟ, ಹತ್ತು ಹೆಜ್ಜೆ ಮುಂದೆ ಬಂದವನಿಗೆ ಏನೊ ಮರ್ತಿದಿನಿ ಅಂತ ಅನ್ನಿಸ್ತು ನಿಂತು ಬಿಟ್ಟ, ನೆನಪಾಗ್ಲಿಲ್ಲಾ ಅಂತ ಮತ್ತೆ ಎರಡು ಹೆಜ್ಜೆ ಇಟ್ಟವನು

“ ಓ ಅಮ್ಮ ಸೊಂಟ ನೋವು ಅಂತ ಮಾತ್ರೆ ಹೇಳಿದ್ಲು ಅಲ್ವ???” ಅಂತ ನೆನಪಾಯ್ತು.

ಹತ್ತು ಹನ್ನೆರಡು ಹೆಜ್ಜೆ ವಾಪಾಸ್ ಹೋದ್ರೆ ಮೆಡಿಕಲ್, ಆದ್ರೆ ಅವನು ಆ ನಿರ್ಜನ ರಸ್ತೆನಲ್ಲಿ ತಲೆ ಕೆರ್ಕೊಂಡು ಮತ್ತೆ ಏನೊ ಯೋಚ್ನೆ ಮಾಡ್ತ ನಿಂತ

“ನಾಳೆ ತಂದ್ರಾಯ್ತು”   ಅಂತ ತನಗೆ ತಾನೆ ಹೇಳ್ಕೊಂಡು ಮತ್ತೆ ಮನೆ ಕಡೆ ಹೊರಟ.
ವಿಷಯ ಏನಂದ್ರೆ ಅವನ ಅಮ್ಮ ಮಾತ್ರೆ ಬೇಕು ಅಂತ ಹೇಳಿ ಆಗಲೇ ಮೂರು ದಿವಸ ಆಗಿತ್ತು.

 ‘ಮೆಡಿಕಲ್ ನಲ್ಲಿ ಮಾತ್ರೆ ಇರಲಿಲ್ಲ’   ಅಂತಾನೊ,   ‘ಲೇಟಾಯ್ತು’ ಅಂತಾನೊ ಹೀಗೆ ದಿನಕ್ಕೊಂದು ಉತ್ತರ ಹೇಳಿ ಅಮ್ಮನ ಬಾಯಿ ಮುಚ್ಚಿಸ್ತಿದ್ದ.

ನಿಜವಾಗಿ ಹೇಳಬೇಕು ಅಂದ್ರೆ ಅವನ ಸ್ವಭಾವನೇ ಹಾಗೆ. ಉಡಾಫೆ, ಸೋಮಾರಿತನ, ಮೊಂಡು ಹಠ, ಮೂಗಿನ ತುದಿ ಕೋಪ, ನಾನು ನನ್ನದು ಅನ್ನೊ ಸ್ವಾರ್ಥ. ಈ ‘ನಾನು ನನ್ನುದು’ ಅನ್ನೊ ವ್ಯಾಪ್ತಿಯಲ್ಲಿ ಅವನೊಬ್ಬನೆ ಇರೋದು, ಆ ಸ್ವಾರ್ಥದ ಕೂಪದಲ್ಲಿ ಅವನ ಅಮ್ಮನಿಗೂ ಜಾಗವಿಲ್ಲ. ಹಾಗಂತ ಕೆಟ್ಟವನೂ ಅಲ್ಲ, ಉಡಾಫೆ ಅಂತ ಆಗಲೆ ಹೇಳಿದ್ನಲ್ವ, ಖುಷಿಯಲ್ಲಿದ್ದಾಗ ಅಮ್ಮ- ಮನೆ ಅಂತ ಎಲ್ಲಾ ಓಡಾಡ್ತಾನೆ, ಇಲ್ಲಾಂದ್ರೆ ಏನೇನು ಇಲ್ಲ….

ಅಲ್ಲಿ ಬೀದಿ ದೀಪ ಬಿಟ್ಟರೆ ಅವನಿಗೆ ಬೇರೆಯಾವ ದಾರಿದೀಪವೂ ಇರಲಿಲ್ಲ, ಏಳು ಗಂಟೆಗೆಲ್ಲಾ ಮೋಡ ಮುತ್ತಿಕೊಂಡು ಪೂರ್ತಿ ಕತ್ತಲಾಗಿತ್ತು. ಬೀದಿ ನಾಯಿಗಳು ಬಿಟ್ಟರೆ ಅವನ ಸಂಗಡಿಗರು ಯಾರು ಜೊತೆಗೆ ಇರಲಿಲ್ಲ. ಗೊತ್ತಿರೋ ದಾರಿಯಾಗಿದ್ರಿಂದ ತನ್ನ ಪಾಡಿಗೆ ತಾನು ಏನೊಯೊಚಿಸ್ತಾ ಹೋಗ್ತಾ ಇದ್ದವನಿಗೆ ಎಲ್ಲೊ ದೂರದಲ್ಲಿ ಎಸ್ಟೇಟ್ ಮಧ್ಯೆ ಚಕ್ ಅಂತ ಯಾವುದೋ ಬೆಳಕು ಬಂದು ಹೋದಹಾಗಾಯ್ತು, ಸ್ವಲ್ಪ ಹೊತ್ತು ಅಲ್ಲೆ ನಿಂತ, ಹಾಗೆ ಹಿಂದೆ ತಿರುಗಿ ಅವನು ಬಂದ ದಾರಿಯನ್ನೇ ನೋಡಿದ ದೂರದಲ್ಲಿ ಬೀದಿದೀಪ ಬಿಟ್ಟರೆ ಮತ್ತೇನು ಕಾಣಿಸಲಿಲ್ಲ, ಮತ್ತೆ ಬೆಳಕು ಬಂದ ಕಡೆ ನೋಡಿದ ಅಲ್ಲಿ ಏನು ಕಾಣಿಸ್ಲಿಲ್ಲ. ಏನೊ ಭ್ರಮೆ ಅಂತ ತನಗೆ ತಾನೆ ಹೇಳ್ಕೊಂಡು ಮತ್ತೆ ಮುಂದೆ ಹೋದ, ಸ್ವಲ್ಪ ಹೊತ್ತಲ್ಲಿ ಮತ್ತೊಮ್ಮೆ ಆ ಬೆಳಕು ಮಿಂಚಿ ಮಾಯವಾಯ್ತು, ವೇಗವಾಗಿ ಬೀಸೊ ಚಳಿಗಾಳಿಯ ಉಊಊ… ಅನ್ನೋ ಶಬ್ದ ಬಿಟ್ಟರೆ ಮತ್ಯಾವ ಶಬ್ದವೂ ಅಲ್ಲಿರಲಿಲ್ಲ, ಆ ಚಳಿಯಲ್ಲು ಅವನ ಮುಖ ಒದ್ದೆಯಾಗೋಕೆ ಶುರುವಾಯಿತು. ಆದರೂ ಧೈರ್ಯಮಾಡಿ ಆ ಬೆಳಕು ಬಂದ ಕಡೆಗೆ ನೋಡುತ್ತ ಮುಂದೆ ಹೆಜ್ಜೆ ಇಟ್ಟ, ಚಿಕ್ಕವನಿದ್ದಾಗ ಅವನ ಅಜ್ಜ ಹೇಳ್ತಿದ್ದ ಕೊಳ್ಳಿದೆವ್ವದ ಕಥೆಗಳೆಲ್ಲ ನೆನಪಾಗ್ತಾ ಇದ್ದ ಹಾಗೆ ಅವನ ನಡಿಗೆಯ ವೇಗ ಕೂಡ ಹೆಚ್ಚಾಗುತ್ತಾ ಹೋಯ್ತು, ಹಾಗೆ ಮುಂದೆ ಹೋಗ್ತಾ ಇದ್ದವನ ಕಣ್ಣಿಗೆ ಮತ್ತೆ ಆ ಬೆಳಕು ಕಾಣಿಸಿಕೊಳ್ತು.

ಮತ್ತೆ ಮಾರ್ಗ ಮಧ್ಯೆ ನಿಂತವನಿಗೆ ಮನಸ್ಸು ನಿರಾಳವಾಗಿ ದೀರ್ಘವಾದ ನಿಟ್ಟುಸಿರು ಬಿಟ್ಟ. ದೂರದ ಎಸ್ಟೇಟ್ ಮಧ್ಯದಲ್ಲಿ ಯಾವುದೋ ಬೀದಿ ದೀಪ ಹಾಳಗಿದ್ದರಿಂದ ಅವಗವಾಗ ಹೊತ್ತಿಕೊಂಡು ಮಾಯವಾಗ್ತಿತ್ತು, ಮರಗಳ ನಡುವೆ ಅಸ್ಪಷ್ಟವಾದ ಬೆಳಕು ಬೀದಿದೀಪ ಅಂತ ಗ್ರಹಿಸುವ ಮೊದಲೆ ಸಣ್ಣಗೆ ನಡುಗಿ ಹೋಗಿದ್ದ . ಬೆವರಿ ಒದ್ದೆಯಾಗಿದ್ದ ಚಕ್ರಪಾಣಿಯ ಮೈಗೆ, ಬೀಸುತ್ತಿದ್ದ ಥಂಡಿ ಗಾಳಿಯಿಂದ ಸಾಮಾನ್ಯಕ್ಕಿಂತ ಜಾಸ್ತಿಯಾಗೆ ಚಳಿಯ ಅನುಭವವಾಯ್ತು, ಮನಸ್ಸು ಸ್ವಲ್ಪ ಹಗುರಾಯ್ತು. ಒಣಗಿದ ಗಂಟಲಿಗೆ ನೀರು ಕುಡಿಬೇಕು ಅಂತ ತನ್ನ ಬ್ಯಾಗ್ ನಿಂದ ಬಿಸಿನೀರಿನ ಬಾಟಲ್ ತೆಗೆದು ನೀರು ಕುಡಿಯೋಕೆ ಶುರು ಮಾಡಿದ. ನೀರು ಕುಡಿತ ಬಲಭಾಗಕ್ಕೆ ತಿರುಗಿದಾಗಲೆ ಗೊತ್ತಾಗಿದ್ದು ಇಷ್ಟು ಹೊತ್ತು ತಾನು ಎಲ್ಲಿ ನಿಂತಿದ್ದೆ ಅಂತ. ಅವನು ನಿಂತಿದ್ದ ರಸ್ತೆ ಬಲಭಾಗದಲ್ಲಿ ಒಂದು ಹಳೆ ಪಾಳುಬಿದ್ದ ಮನೆಯಿತ್ತು. ಸುಮಾರು ವರ್ಷಗಳಿಂದ ಅಲ್ಲಿ ಯಾರು ವಾಸವಾಗಿರ್ಲಿಲ್ಲ, ಆ ಮನೆ ದರೋಡೆಯಾಗಿ ಅಲ್ಲಿ ಒಂದು ಹೆಂಗಸಿನ ಕೊಲೆಯಾಗಿತ್ತು ಅನ್ನೊದು ಮಾತ್ರ ಇವನಿಗೆ ಗೊತ್ತು.

ಮನೆ ಮುಂದೆ ಗೇಟಿಗೆ ಬೀಗ ಹಾಕಿತ್ತು. ಮನೆ ಮುಂದಿನ ಎರಡು ಬಾಗಿಲಿನಲ್ಲಿ ಒಂದು ಮುಚ್ಚಿತ್ತು, ಇನ್ನೊಂದು ಮುರಿದು ಬಿದ್ದಿತ್ತು. ಬಾಗಿಲಿನ ಮೇಲೆ ಒಂದು ಲೈಟ್ ನೇತುಹಾಕಿದ್ರು. ನೀರು ಕುಡಿದು ಬಾಟಲ್ ನ ಬ್ಯಾಗ್ ನಲ್ಲಿಟ್ಟು ಕರ್ಚೀಫ್ ತೆಗೆದು ಮುಖ ಒರೆಸಿಕೊಳ್ತಾ ಇದ್ದ, ದೂರದ ತಾತಯ್ಯನ ಗುಡ್ಡದ ಕಡೆಯಿಂದ ಊಊಊಂ… ಅಂತ ಪ್ರಾಣಿ ಊಳಿಡೊದು ಕೇಳಿಸ್ತು, ಅದು ನಾಯಿನೋ ತೋಳಾನೊ ಅಂತ ಯೋಚಿಸ್ತ ಬ್ಯಾಗ್ ನಿಂದ ಟಾರ್ಚ್ ಹೊರತೆಗೆದು ಅಲ್ಲಿಂದ ಹೊರಡೊ ಮನಸು ಮಾಡಿದ, ಇದ್ದಕಿದ್ದ ಹಾಗೆ ಅವನ ಬೆನ್ನ ಹಿಂದೇನೆ ಊಊಊಂ… ಅಂತ ನಾಯಿ ಜೋರಾಗಿ ಊಳಿಡೊಕೆ ಶುರುಮಾಡಿತು, ಅಚಾನಕ್ ಆಗಿ ಬಂದ ಕೂಗಿನಿಂದ ಬೆಚ್ಚಿ ಬಿದ್ದವನು ತಿರುಗಿ ನೋಡಿದ, ಇವನನ್ನ ನೋಡಿ ಕೂಗು ನಿಲ್ಲಿಸಿದ ನಾಯಿ ಬಾಲ ಅಲ್ಲಾಡಿಸೊಕೆ ಶುರು ಮಾಡಿತು, ನಾಯಿ ಇದ್ದ ಕಡೆ ಟಾರ್ಚ್ ಬೆಳಕು ಬಿಟ್ಟು ಒಂದು ಕಲ್ಲು ತೆಗೊಂಡು ನಾಯಿ ಇದ್ದ ಕಡೆ ಬೀಸಿದ.

ನಾಯಿ ಕುಯ್ಂ… ಅಂತ ಶಬ್ದ ಮಾಡಿಕೊಂಡು ಅಲ್ಲಿಂದ ಕತ್ತಲಲ್ಲಿ ಮರೆಯಾಯಿಯ್ತು, ಅದೇ ಹೊತ್ತಿನಲ್ಲಿ ಆ ಪಾಳು ಮನೆ ಹತ್ರ ಏನೋ ಜೋರಾಗಿ ಶಬ್ದ ಆಯ್ತು, ಬಾಗಿಲ ಮೇಲೆ ತೂಗು ಹಾಕಿದ್ದ ಲೈಟ್ ಆ ಕಡೆಯಿಂದ ಈ ಕಡೆ- ಈ ಕಡೆಯಿಂದ ಆ ಕಡೆ ಅಲುಗಾಡುತಿತ್ತು, ಮುಚ್ಚಿಕೊಂಡಿದ್ದ ಬಾಗಿಲು ಯಾರೊ ಜೋರಾಗಿ ತಳ್ಳಿದ ಹಾಗೆ ತೆರೆದುಕೊಂಡು ಅದೇ ವೇಗದಲ್ಲಿ ವಾಪಸ್ ಬಂದು ಮುಚ್ಚಿಕೊಳ್ತು. ಈಗ ತಾನೆ ಕೊಳ್ಳಿ ದೆವ್ವದ ರಹಸ್ಯವನ್ನ ಭೇದಿಸಿದ್ದ ಚಕ್ರಪಾಣಿಗೆ ಮತ್ತೆ ನಡುಕ ಶುರುವಾಯ್ತು, ಭಯದಲ್ಲಿ ಆ ಕಡೆ ಈ ಕಡೆ ನೋಡಿದವನಿಗೆ ಯಾರು ಕಾಣಿಸಲಿಲ್ಲ, ಉಸಿರಿನ ವೇಗ ಜೋರಾಯ್ತು, ಕೈಯಲ್ಲಿ ಮುಖದ ಬೆವರನ್ನ ಒರೆಸಿಕೊಳ್ಳೊದಿಕ್ಕೆ ಶುರು ಮಾಡಿದ. ಮತ್ತೆ ಮೌನ… ಅವನ ಎದೆ ಬಡಿತವೇ ಅವನಿಗೆ ಸ್ಪಷ್ಟವಾಗಿ ಕೇಳಿಸುವಷ್ಟು ಮೌನ, ಮತ್ತೆ ತಾತಯ್ಯನ ಗುಡ್ಡದಿಂದ ಊಳಿಡುವ ಶಬ್ದ. ಒಂದ ಸೆಕುಂಡು ಕೂಡ ತಡ ಮಾಡದೆ ಅಲ್ಲಿಂದ ವೇಗವಾಗಿ ಓಡೊಕೆ ಶುರು ಹಚ್ಚಿಕೊಂಡ.

ದಾರಿ ಮಧ್ಯೆ ಇದ್ದ ದಾರಿ ದೀಪ ಕೈ ಕೊಟ್ಟಿದ್ದರಿಂದ ಕತ್ತಲಲ್ಲೆ ಸ್ವಲ್ಪ ದೂರ ಓಡಿದ, ದೂರದಲ್ಲಿ ಎಲ್ಲೋ ಟಾರ್ಚ್ ಬೆಳಕು ಕಾಣಿಸಿತು. ಅವಾಗಲೇ ನೆನಪಾಗಿದ್ದು ಅವನ ಕೈಯಲ್ಲಿ ಟಾರ್ಚ್ ಇದೆ ಅಂತ. ಓಡೊದನ್ನ ನಿಲ್ಲಿಸಿ ಏದುಸಿರು ಬಿಟ್ಟಿಕೊಂಡು ನಿಧಾನಕ್ಕೆ ನಡೆಯೋದಕ್ಕೆ ಶುರುಮಾಡಿದ. ಹತ್ತಿರದ ಎಸ್ಟೇಟ್ ಕೆಲಸಗಾರರು ಎದುರುಗಡೆಯಿಂದ ಬರ್ತಾ ಇದ್ರು, ಅವರದೇ ಆ ಟಾರ್ಚ್ ಬೆಳಕು. ಇವನಿಗೆ ಸ್ವಲ್ಪ ಸಮಾಧಾನವಾಯ್ತು. ಮುಂದೆ ಮತ್ತೆ ಒಂದೇ ಒಂದು ಸ್ಟ್ರೀಟ್ ಲೈಟ್ ಇದೆ, ಅದರ ಪಕ್ಕದಲ್ಲೆ ಅವನ ಮನೆ.

ಹೇಗೊ ಮನೆ ಸೇರ್ಕೊಂಡ,… ಯಾವಾಗಲೂ ಅವನು ಗೇಟ್ ತೆರೆಯೋ ಶಬ್ದ ಕೇಳಿ ಅವನು, ಗೇಟಿಂದ ಮನೆ ಬಾಗಿಲಿಗೆ ಹೋಗೋ ಹೊತ್ತಿಗೆ ಅವನ ಅಮ್ಮ ಬಾಗಿಲು ತೆಗಿತಿದ್ರು. ಆದ್ರೆ ಇವತ್ತು ಬಾಗಿಲಿನ ಹತ್ರ ಹೋದರು ಬಾಗಿಲು ತೆಗಿಲೇ ಇಲ್ಲ. ಓಡೊಡಿ ಸುಸ್ತಾಗಿದ್ದ ಇವನಿಗೆ ಜೋರಾಗಿ ಅಮ್ಮನನ್ನ ಕೂಗೊ ಶಕ್ತಿಯೂ ಇರಲಿಲ್ಲ. ಬಾಗಿಲು ಬಡಿದ, ಒಳಗಡೆಯಿಂದ

“ಬಂದೇ……..” ಅನ್ನೊ ಕೂಗು ಕೇಳಿಸ್ತು. ಸ್ವಲ್ಪ ಹೊತ್ತಿನ ನಂತರ ಅವನ ಅಮ್ಮ ಬಂದು ಬಾಗಿಲು ತೆಗೆದ್ರು, ಬೆವತು ಬೆಂಡಾಗಿದ್ದ ಅವನ ಮುಖವನ್ನ ನೋಡಿ

“ಏನೋ ಪಾಣಿ…. ಇಷ್ಟೊಂದು ಬೆವತು ಕೊಂಡಿದಿಯ???? ಓಡಿ ಕೊಂಡು ಬಂದ್ಯ????”  ಅಂತ ಕೇಳಿದ್ರು. ಬಲಕೈಯಲ್ಲಿ ಸೊಂಟ ಹಿಡಿದುಕೊಂಡಿದ್ದ ಅವರು ಕೂಡ ಸುಸ್ತಾಗಿದ್ದ ಹಾಗೆ ಕಾಣಿಸ್ತು.

“ಬಾಗಿಲು ತೆಗೆಯೋಕೆ ಯಾಕೆ ಇಷ್ಟು ಲೇಟು????”  ಉತ್ತರನ ಪೌರುಷ ಒಲೆ ಮುಂದೆ ಅನ್ನೋ ಹಾಗೆ, ಜೀವ ಕೈಯಲ್ಲಿ ಹೀಡ್ಕೊಂಡು ಭಯದಲ್ಲಿ ಓಡಿ ಬಂದಿದ್ದ ಅವನು, ಇಲ್ಲಿ ಬಂದವನೆ ಅಮ್ಮನನ್ನ ಗದರಿಸೋ ಹಾಗೆ ಮಾತನಾಡೊಕೆ ಶುರು ಮಾಡಿದ.

“ಸಂಜೆಯಿಂದ ಹಾಳಾದ್ದು ಈ ಸೊಂಟ ನೋವು ಜಾಸ್ತಿ ಆಗಿದೆ ಕಣೊ, ಕೂತ್ರೆ ಬೇಗ ಎಳೊಕೆ ಆಗೊಲ್ಲ, ಅದಿಕ್ಕೆ ತಡ ಆಯ್ತು….. ಅದ್ಸರಿ ಇದ್ಯಾಕೆ ಇಷ್ಟು ಬೆವೆತು ಕೊಂಡಿದ್ಯ????”

“ಸ್ವಲ್ಪ ಜ್ವರ ಇದ್ದಹಾಗಿತ್ತು, ಇನ್ನು ರಾತ್ರಿ ಜೋರಾಗೋದು ಬೇಡ ಅಂತ ಬರೋವಾಗ್ಲೆ ಮಾತ್ರೆ ತೆಗೊಂಡೆ…. ಪವರ್ ಜಾಸ್ತಿ ಇತ್ತು ಅನ್ಸುತ್ತೆ, ಅದಿಕ್ಕೆ ಸ್ವಲ್ಪ ಸುಸ್ತಾಗಿ ಬೆವರ್ತಾ ಇದೆ ಅಷ್ಟೆ” ಅಂತ ಹೇಳಿ ಅಲ್ಲೆ ಇದ್ದ ಕುರ್ಚಿ ಮೇಲೆ ಕೂತು ಬೆವರು ಒರೆಸಿಕೊಳ್ಳೊದಿಕ್ಕೆ ಶುರು ಮಾಡಿದ.

“ ಎಷ್ಟು ಸರ್ತಿ ಹೇಳಿದಿನಿ ಬರೀ ಹೊಟ್ಟೆಗೆ ಮಾತ್ರೆ ತಿನ್ಬೇಡ ಅಂತ???? ಕೇಳೊದೆ ಇಲ್ಲ….” ಅಂತ ನಿಧಾನಕ್ಕೆ ಅವನ ಹತ್ತಿರ ಬಂದು ಜ್ವರ ಇದ್ಯಾ ಅಂತ  ಅವನ ಹಣೆ ಮೇಲೆ ಕೈ ಇಟ್ಟು “ ಸ್ವಲ್ಪ ಜ್ವರ ಇರೋ ಹಾಗಿದೆ” ಅಂದ್ರು.

“ಸರಿ ನಾನು ಮುಖ ತೊಳ್ಕೊಂಡು ಬರ್ತೀನಿ…. ಊಟಕ್ಕೆ ರೆಡಿ ಮಾಡು… ಸುಸ್ತಾಗಿದೆ ಇವತ್ತು ಬೇಗ ಮಲಗ್ತೀನಿ” ಅಂತ ಬಚ್ಚಲು ಮನೆ ಕಡೆ ಹೊರಟ

“ಸೊಂಟ ನೋವಿನ ಮಾತ್ರೆ ತಾರೊ… ಅಂತ ಹೇಳಿದ್ದೆ ತಂದ್ಯೆನೊ????”

“ಇಲ್ಲ ಅಮ್ಮ…. ಅದೂ…. ಟೆನ್ಷನ್ ನಲ್ಲಿ ಮರ್ತು ಬಿಟ್ಟೆ…. ನಾಳೆ ತರೋಣ ಬಿಡು” ಅಂತ ಅಲ್ಲಿಂದ ತಲೆ ತಗ್ಗಿಸಿಕೊಂಡು ಹೊರಟುಹೋದ

“ಏನು ಹುಡುಗಾನೊ” ಅಂತ ಸೊಂಟದ ಮೇಲೆ ಕೈ ಇಟ್ಟುಕೊಂಡು ಬೆನ್ನು ಬಗ್ಗಿಸುತ್ತಾ ಬೇಸರಮಾಡಿಕೊಂಡು ಅಡುಗೆ ಮನೆ ಕಡೆ ಹೋದ್ರು.

***

ಚಕ್ರಪಾಣಿಗೆ ಊಟ ಬಡಿಸುತ್ತಾ ತಾಯಿ ಪಕ್ಕದಲ್ಲೇ ಕೂತಿದ್ರು, ಮುಖ ಗಂಟು ಹಾಕಿಕೊಂಡು ಅವನು ಊಟ ಮಾಡ್ತಿದ್ದ.

“ನಾಳೆನಾದ್ರು ಮಾತ್ರೆ ಮರೀದೆ ತೆಗೊಂಡು ಬಾ.”

“ನಾಳೆ ತಂದ್ರಾಯ್ತು ಬಿಡು… ಇಲ್ಲಾಂದ್ರೆ ಆ ಮಾತ್ರೆನೆಲ್ಲ ತಿನ್ನೋದು ಬಿಟ್ಟು ವಾಕಿಂಗು, ಇಲ್ಲ ಸಣ್ಣ ಪುಟ್ಟ ವ್ಯಾಯಾಮ ಇದ್ರೆ ಮಾಡು… ಜಾಸ್ತಿ ಮಾತ್ರೆ ತಿಂದರೆ ಅದೂ ಒಳ್ಳೆದಲ್ಲ”

“ಹೌದಪ್ಪ ಅದೊಂದು ಬಾಕಿ ಇತ್ತು…. ಇಡೀ ದಿನ ಕತ್ತೆತರ ದುಡಿದಿದ್ದಕ್ಕೆ ಇಲ್ಲಿ ಸೊಂಟ ಬಿದ್ದು ಹೋಗಿದೆ…. ಈ ವಯಸ್ಸಲ್ಲಿ ಅದನ್ನೂ ಮಾಡ್ತೀನಿ….”

ಚಕ್ರಪಾಣಿ ಸುಮ್ಮನೆ ಊಟ ಮಾಡ್ತಾ ಇದ್ದ.

“ಜ್ವರಕ್ಕೆ ಮಾತ್ರೆ ತಿಂದೆ ಅಂದ್ಯಲ್ವ… ಮಾತ್ರೆ ಎಲ್ಲಿಂದ ತೆಗೊಂಡೆ???? ಮೆಡಿಕಲ್ ಹೋಗಿದ್ಯ????”

“ಅದೂ….” ಅಂತ ತಡವರಿಸೋಕು ಶುರು ಮಾಡಿದ  “ ಇಲ್ಲ ನನ್ನ ಫ್ರೆಂಡು…. ಅವನ ಬ್ಯಾಗ್ ನಲ್ಲಿ ಇಟ್ಕೊಂಡಿರ್ತಾನೆ ಅದನ್ನ ಕೊಟ್ಟ”

“ಹಾಗ….. ಮತ್ತೆ ವಿಕ್ಸ್ ಕೂಡ ಇರುತ್ತಾ ಅವನ ಹತ್ರ ಇರುತ್ತಾ???”  ಪಾಣಿ ಏನು ಮಾತಾಡ್ಲಿಲ್ಲ…..

“ಮಜ್ಜಿಗೆ ಕೊಡು….” ಅಂತ ಮಾತು ಮರೆಸೋಕೆ ನೋಡಿದ, ಮಜ್ಜಿಗೆ ಪಾತ್ರೆ ಮುಂದೆ ಇಡ್ತಾ ಅಮ್ಮ ಮತ್ತೆ ಮಾತಿಗೆಳ್ದ್ರು

“ನೀನು ಬಿಚ್ಚಿಟ್ಟಿದ್ದ ಪ್ಯಾಂಟ್ ನಲ್ಲಿ ಈ ಕವರ್ ಸಿಕ್ತು…. ಇದರ ಮೇಲೆ ‘ಸನ್ನಿಧಿ ಮೆಡಿಕಲ್ಸ್’ ಅಂತ ಹೆಸ್ರಿದೆ, ಇದರ ಒಳಗಡೆ ಒಂದೆರಡು ಮಾತ್ರೆ, ವಿಕ್ಸ್ ಎಲ್ಲಾ ಇದೆ, ನೀನು ಇವತ್ತು ಮೆಡಿಕಲ್ ಗೆ ಹೋಗಿದ್ದೆ ಅಲ್ವ????”

“ನಾನು ಊಟ ಮಾಡೊದು ನಿಂಗೆ ಇಷ್ಟ ಇಲ್ವ??? ದುಡಿದು ಸುಸ್ತಾಗಿ ಬಂದ್ರೆ ನೆಮ್ಮಯಾಗಿ ಇರೋಕು ಬಿಡಲ್ಲ…” ಅಂತ ಜೋರಾಗಿ ತಟ್ಟೆ ತಳ್ಳಿಬಿಟ್ಟ.

“ಗೊತ್ತು ಬಿಡು… ಈ ಥರ ತಟ್ಟೆ ತಳ್ಳೊದನ್ನ ತುಂಬಾ ಸಿನೆಮಾದಲ್ಲಿ ನಾನು ನೋಡಿದಿನಿ …. ಮೊದಲಿನ ಥರ ಆಗಿದ್ರೆ ನಿನ್ನನ್ಯಾರು ದಮ್ಮಯ್ಯ ಹಾಕ್ತಿದ್ರು ಮಾತ್ರೆ ತಂದುಕೊಡು ಅಂತ???? ಆರೋಗ್ಯ ಸರಿ ಇಲ್ಲ ಅಂತ ಮಾತ್ರೆ ತಂದು ಕೊಡು ಅಂದ್ರೆ ವ್ಯಾಯಾಮ, ವಾಕಿಂಗ್ ಅಂತ ಬಿಟ್ಟಿ ಸಲಹೆ ಅಲ್ವ”  ಅಂದಾಗ ಅಮ್ಮನ ಕಣ್ಣಲ್ಲಿ ನೀರು ತುಂಬಿಕೊಳ್ತು. ಅವನು ತಳ್ಳಿದ ತಟ್ಟೆಯನ್ನ ಕಷ್ಟಪಟ್ಟು ಎತ್ತಿಕೊಂಡ್ರು.

ಅಲ್ಲಿಂದ ನೇರವಾಗಿ ತನ್ನ ರೂಂ ಗೆ ಬಂದ ಪಾಣಿ ಮಂಚದ ಮೇಲೆ ಕೂತು ಬಿಟ್ಟ. ಅಡುಗೆ ಮನೆಯಿಂದ ಮತ್ತೆ ಅಮ್ಮ ಏನೊ ಹೇಳೋದು ಕೇಳಿಸ್ತು

“ನಾನೇನು ದಾರಿಯಲ್ಲಿ ಹೋಗೊರನ್ನ ಕೇಳಿದ್ನ ಮಾತ್ರೆ ಬೇಕು ಅಂತ, ಮೂರುದಿವಸದಿಂದ ನೆಟ್ಟಗೆ ನಿಂತು ಕೆಲಸ ಮಾಡೊಕಾಗ್ತಿಲ್ಲ… ನನಗಾಗ್ತಾ ಇರೋ ನೋವು ಯಾರತ್ರ ಹೇಳಲಿ…..ಯಾರಿಗ್ ಗೊತ್ತು ಸಾಯೋ ಈ ಮುದುಕಿ ಮಾತ್ರೆಗೆ ದುಡ್ಡು ಯಾಕೆ ಖರ್ಚು ಮಾಡೊದು ವ್ಯರ್ಥ ಅಂತ ಅನಿಸಿರಬೇಕು….., ಇಲ್ಲಾಂದ್ರೆ ಮೂರು ದಿವಸ ದಿನಕ್ಕೊಂದು ಸುಳ್ಳು ಕಾರಣ ಇರ್ತಿತ್ತ???” ಅಂತ ಅಳುತ್ತಾ ಮಾತನಾಡೊ ಜೊತೆಗೆ  ಪಾತ್ರೆಯನ್ನ ನೆಲಕ್ಕೆ ಕುಕ್ಕೊ ಶಬ್ದಾನು ಕೇಳಿಸ್ತಿತ್ತು.

ಪಾಣಿ ತಲೆದಿಂಬಿಗೆ ಹಾಗೆ ಸ್ವಲ್ಪ ಒರಗಿಕೊಂಡು “ಛೆ….. ತಪ್ಪು ಮಾಡ್ಬಿಟ್ಟೆ…. ನೆನಪಾದ ಕೂಡಲೆ, ವಾಪಸ್ ಮೆಡಿಕಲ್ ಗೆ ಹೋಗ್ತಿದ್ರೆ ಐದೆ ನಿಮಿಷದ ಕೆಲಸ…. ನನ್ನ ಬುದ್ದಿಯಿಂದ ಅಮ್ಮನಿಗೆ ಪ್ರಾಬ್ಲಮ್…. ಈಗಲೇ ಪೇಟೆಗೆ ಹೋಗಿ ಬರೋಣ ಅಂದ್ರೆ ನಾನು ಹೋಗೊ ಹೊತ್ತಿಗೆ ಕ್ಲೋಸ್ ಆಗಿರುತ್ತೆ”  ಅಂತ ಯೋಚನೆ ಮಾಡ್ತಾ ಕೂತ. ಅವನ ಕೋಣೆಯ ಕಿಟಲಿ ಬಾಗಿಲು ಡಬ್ ಅಂತ ಕಿಟಕಿಗೆ ಬಂದು ಬಡೀತು. ಸೀದ ಎದ್ದವನೇ ಕಿಟಕಿ ಬಾಗಿಲು ಹಾಕೊದಿಕ್ಕೆ ಹೋದ ಹೊರಗಡೆ ಗಾಳಿ ರಭಸ ಜೋರಿತ್ತು. ಬಾನಂಗಳದಲ್ಲಿ ಮಿಂಚು, ದೂರದಲ್ಲೆಲ್ಲೊ ಗುಡುಗಿನ ಸದ್ದು, ಮಳೆ ಬರೋಹಾಗಿತ್ತು. ದೂರದಲ್ಲಿ ಕಾಣ್ತಾ ಇದ್ದ ಬೀದಿ ದೀಪ ನೋಡಿದವನಿಗೆ ಆ ಪಾಳು ಮನೆ, ತೂಗಾಡೊಕೆ ಶುರುಮಾಡಿದ ಲೈಟು, ಊಳಿಟ್ಟ ನಾಯಿ….. ಎಲ್ಲವೂ ಅವನ ಕಣ್ಣ ಮುಂದೆ ಹಾದು ಹೋಯ್ತು. ವೇಗವಾಗಿ ಕಿಟಕಿ ಮುಚ್ಚಿದವನೇ ಮತ್ತೆ ಮಲಗೋ ಮಂಚದ ಹತ್ರ ಬಂದ.  ಒಳಗಡೆಯಿಂದ ಪಾತ್ರೆ ತೊಳೆಯೊದು, ಪಾತ್ರೆ ಕುಕ್ಕೊದು ಶಬ್ದ ಕೇಳ್ತಾನೆ ಇತ್ತು. ಮತ್ತೆ ದಿಂಬಿಗೆ ತಲೆ ಕೊಟ್ಟು ಕಣ್ಣು ಮುಚ್ಚಿಕೊಂಡ.

***

ಬಿರುಗಾಳಿ ಹಾಗೆ ಬೀಸುತ್ತಿದ್ದ ಆ ವೇಗವಾದ ಗಾಳಿಯ ಮಧ್ಯೆ ಚಕ್ರಪಾಣಿ ಆ ನಡುರಾತ್ರಿಯಲ್ಲಿ ಒಬ್ಬನೇ ನಿಂತಿದ್ದ, ಕೈಯಲ್ಲಿ ಒಂದು ಟಾರ್ಚ್, ಬೀಸೋ ಗಾಳಿಗೆ ಅವನ ತಲೆಗೂದಲೆಲ್ಲ ಕೆದರಿ ಹೋಗಿತ್ತು, ಕಣ್ಣಿಗೆ ಧೂಳು ತರಗೆಲೆಗಳು ಬೀಳದೇ ಇರೋ ಹಾಗೆ ಕೈ ಅಡ್ಡ ಹಿಡ್ಕೊಂಡು ಆ ಪಾಳುಮನೆಯ ಗೇಟ್ ತೆಕ್ಕೊಂಡು ಒಳಗಡೆ ಹೋಗ್ತಾನೆ. ಗುಡುಗು, ಮಿಂಚು ಬರ್ತಾ ಇದ್ದದ್ದು ನೋಡಿದ್ರೆ ಯಾವ ಕ್ಷಣದಲ್ಲಾದ್ರು ಮಳೆ ಬರೋಹಾಗಿತ್ತು. ಇದ್ಯಾವುದೂ ಲೆಕ್ಕಕ್ಕೆ ಇಲ್ಲಾ ಅನ್ನೋ ಹಾಗೆ ಅವನು ಮತ್ತೆ ಆ ಒಂಟಿ ಬಾಗಿಲು ಇರೋ ಪಾಳುಮನೆ ಹತ್ರ ನಡಿತಾನೆ. ಸಂಜೆ ಮನೆಗೆ ಹೋಗುವಾಗ ಇದ್ದಕಿದ್ದಹಾಗೆ ತೂಗಾಡೋಕೆ ಶುರುವಾಗಿದ್ದ ಆ ಬಾಗಿಲಿನ ಮೇಲಿನ ಲೈಟ್ ಇನ್ನೂ ತೂಗಾಡ್ತಾ ಇತ್ತು. ಒಂದು ಬಾಗಿಲು ಮುರಿದು ಬಿದ್ದಿತ್ತು, ಇನ್ನೊಂದು ಬಾಗಿಲನ್ನ ಒಳಗಡೆ ತೆರೆದುಕೊಂಡು ‘ಪಾಣಿ’ ಮುಂದೆ ಹೋಗ್ತಾನೆ.

ಒಳಗಡೆ ಬರೀ ಕತ್ತಲು, ಟಾರ್ಚ್ ನ ಬೆಳಕಿನಲ್ಲಿ ಅವನಿಗೆ ಕಾಣಿಸಿದ್ದು ಮುರಿದು ಬಿದ್ದಿರೋ ಹಳೆಯ ಮೇಜು, ಕುರ್ಚಿ, ಧೂಳು, ಸುತ್ತಾ ಹರಡಿಕೊಂಡಿರೂ ಜೇಡರಬಲೆ. ಇದರ ನಡುವೆ ಯಾವುದೋ ಒಂದು ಹೆಂಗಸು ನೋವಿನಿಂದ ಕೊರಗೋ ಶಬ್ದ ಕೇಳಿಸ್ತಿತ್ತು. ಆ ಶಬ್ದ ಬಂದ ಕಡೆಗೆ ಇವನು ಮುಂದುವರೀತಾನೆ, ಎಡಭಾಗದ ಒಂದ ಕೋಣೆಯಿಂದ ಆ ಕೂಗು ಕೇಳ್ತಾ ಇತ್ತು. ಇವನು ಆ ರೂಂ ಹತ್ರ ಹೋಗ್ತಾನೆ. ಆದರೆ ಆ ಕೋಣೆ ಬಾಗಿಲಲ್ಲಿ ಧೂಳಾಗಲಿ, ಜೇಡರ ಬಲೆಯಾಗಲಿ ಇರಲಿಲ್ಲ, ನಿಧಾನಕ್ಕೆ ಆ ಬಾಗಿಲು ತೆರೀತಾನೆ, ಕೋಣೆಯ ಒಳಗಡೆ ಎಲ್ಲವೂ ಸರಿಯಾಗಿದೆ ಮೇಜು, ಕುರ್ಚಿ ಮಂಚ ಆ ಮಂಚದ ಪಕ್ಕದಲ್ಲಿ ಉರಿತಾ ಇರೋ ಎಣ್ಣೆ ದೀಪ. ಆ ಮಂಚದಲ್ಲಿ ಒಂದು ಹೆಂಗಸು ಮಲಗಿದಾಳೆ, ಅವಳು ನೋವಿಂದ ನರಳಾಡ್ತಾ ಆ ಕಡೆ ಈ ಕಡೆ ಹೊರಳಾಡ್ತಾ ಇದ್ಲು. ಇವನು ಮೆಲ್ಲಗೆ ಆ ಹೆಂಗಸಿನ ಹತ್ರ ಹೋಗ್ತಾನೆ. ದೀಪದ ಬೆಳಕಿನಲ್ಲಿ ಅವಳ ಸ್ಪಷ್ಟವಾಗಿ ಕಾಣಿಸುತ್ತೆ. ಆಕೆಯನ್ನ ನೋಡಿದವನೇ

“ಅಮ್ಮಾ….. ನೀನು ಇಲ್ಲಿ..????” ಅಂತ ಮಂಚದ ಹತ್ರ ಹೋಗ್ತಾನೆ, ಅವನ ನಾಲಗೆ ಒಣಗೋಕೆ ಶುರುವಾಯ್ತು. ಮಂಚದ ಪಕ್ಕದಿಂದ ಇನ್ನೊಂದು ಹೊಸ ಧ್ವನಿ

“ನಮಸ್ಕಾರ ಸರ್……..”

ಚಕ್ರಪಾಣಿ ಕೈಯಲ್ಲಿದ್ದ ಟಾರ್ಚ್ ಬೆಳಕನ್ನ ಯಾರು ಅಂತ ನೋಡೊಕೆ ಆ ಕಡೆ ಬಿಡ್ತಾನೆ, ಅವನ ಮುಖ ಮತ್ತೆ ಬೆವರೋಕೆ ಶುರುವಾಗುತ್ತೆ. ಮಂಚದ ಪಕ್ಕದಲ್ಲಿ ಕೂತಿದ್ದು ಮತ್ಯಾರು ಅಲ್ಲ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂದೆ ಇದ್ದ ಅದೇ ಹುಚ್ಚ, ಉದ್ದ ಗಡ್ಡ, ಹರಿದಿರೂ ಪ್ಯಾಂಟ್.

ಆ ಹುಚ್ಚ ಮತ್ತೆ ಮಾತು ಮುಂದುವರೆಸಿದ

“ಅಮ್ಮನಿಗೆ ಹುಶಾರಿಲ್ಲ ಅಂತ ಗೊತ್ತಿದ್ರು…… ನಿವ್ಯಾಕೆ ಮಾತ್ರೆ ತಂದು ಕೊಡ್ಲಿಲ್ಲ ಸರ್???..... ಮೆಡಿಕಲ್ ಹತ್ರಾನೆ ಇದ್ದು  ನೀವು ಯಾಕೆ ಮಾತ್ರೆ ತರ್ಲಿಲ್ಲ ಸರ್???”

ಚಕ್ರಪಾಣಿ ಅವನನ್ನ ನೋಡಿ ಹಿಂದೆ ಹಿಂದೆ ಹೋಗ್ತಾ

“ಯಾರು ನೀನು….. ನಮ್ಮಮ್ಮ ಯಾಕೆ ಈ ಪಾಳು ಮನೆಯಲ್ಲಿದ್ದಾಳೆ…. ಇಲ್ಲಿಗೆ ಹೇಗೆ ಬಂದಿದ್ದು” ಅಂತ ತಡವರಿಸಿಕೊಂಡು ಕೇಳೊ ಹೊತ್ತಿಗೆ, ಟಣ್…. ಅಂತ ಮೇಲಿಂದ ಏನೋ ಬಿದ್ದ ಶಬ್ದ ಕೇಳಿಸ್ತು…….

ಮನೆಯಲ್ಲಿ ಮಂಚದ ಮೇಲೆ ಗಾಢ ನಿದ್ದೆಯಲ್ಲಿದ್ದ ಚಕ್ರಪಾಣಿ ಅಚಾನಕ್ ಆಗಿ ಎದ್ದು ಕೂತ, ಅವನು ಹಾಕಿಕೊಂದಿದ್ದ ಬನಿಯನ್ ಅಂತು ಬೆವತು ಬಚ್ಚಲ ಮನೆಯಾಗಿತ್ತು. ಸುತ್ತಲೂ ಕತ್ತಲು, ಒಂದು ಚಿಕ್ಕ ಬೆಳಕಿನ ಕಿಡಿಯೂ ಅವನ ಕಣ್ಣಿಗೆ ಬೀಳದಷ್ಟು ಕತ್ತಲು.  ಆ ಕತ್ತಲಲ್ಲಿ ತಾನು ಎಲ್ಲಿದಿನಿ ಅಂತಾನೆ ಅವನೆ ಗೊತಾಗ್ತಿಲ್ಲ. ಪಕ್ಕದಲ್ಲಿ ಮೇಜಿನ ಮೇಲೆ ಇಟ್ಟುದ ಟಾರ್ಚ್ ಗೆ ಹುಡುಕಾಡಿದ.
ಕೈಗೆ ಟಾರ್ಚ್ ಸಿಕ್ಕ ನಂತರವೇ ಅವನಿಗೆ ನಂಬಿಕೆ ಬಂದಿದ್ದು ತಾನು ಪಾಳುಮನೆ ಓಳಗೆ ಹೋಗಿದ್ದು, ಆ ಹುಚ್ಚ, ಅಮ್ಮ ಎಲ್ಲಾ ಕನಸು ಅಂತ. ಟಾರ್ಚ್ ಬೆಳಕಿನಲ್ಲಿ ನೋಡಿದಾಗ ಒಂದು ಲೋಟ ನೆಲಕ್ಕೆ ಬಿದ್ದು ನೀರು ಚೆಲ್ಲಿರೋದು ಕಾಣಿಸ್ತು, ಆ ಲೋಟದ ಒಳಗಿಂದ ಒಂದು ಹಲ್ಲಿ ಓಡಿ ಹೋಯ್ತು. ಅದೇ ಟಣ್…. ಶಬ್ದಕ್ಕೆ ಅವನ ಕನಸು ಅರ್ಧಕ್ಕೆ ನಿಂತು ಎಚ್ಚರವಾಗಿದ್ದು.

ರಾತ್ರಿ ಅಮ್ಮನ ಹತ್ರ ಜಗಳಮಾಡಿಕೊಂಡು ಮಲಗಬೇಕಾದ್ರೆ ರೂಂ ಲೈಟ್ ಆರಿಸಿರ್ಲಿಲ್ಲ ಅಂತ ನೆನಪ್ಪಯ್ತು. ಅಲ್ಲಿಂದಾನೆ ಲೈಟ್ ಸ್ವಿಚ್ ಇರೋ ಕಡೆ ಟಾರ್ಚ್ ಬೆಳಕು ಬಿಟ್ಟ. ಸ್ವಿಚ್ ಆಫ್ ಆಗಿರ್ಲಿಲ್ಲ ಹಾಗೆ ಇತ್ತು. ಆದರೆ ಕರೆಂಟ್ ಹೋಗಿತ್ತು. ಮೊಬೈಲ್ ತೆಗೆದು ನೋಡಿದವನಿಗೆ ಗಂಟೆ 2:10 ಅಂತ ಗೊತ್ತಾಯ್ತು. ಹಾಳು ಕನಸಿಗೆ ಹೆದರಿ ಮೈಯೆಲ್ಲ ಬಿಸಿಯೇರಿತ್ತು. ನೀರು ಕುಡಿಯೋಕೆ ಅಂತ ಕೋಣೆಯಿಂದ ಹೊರಬಂದು, ಅಡುಗೆ ಮನೆಯತ್ತ ಹೋದ. ಅಡುಗೆ ಮನೆ ಮೂಲೆಯಲ್ಲಿರುವ ದೇವರ ಮನೆ ದೀಪ ಬಿಟ್ಟರೆ ಮತ್ಯಾವ ಬೆಳಕು ಮನೆಯಲ್ಲಿ ಕಾಣಲಿಲ್ಲ. ಗಾಜಿನ ಕಿಟಕಿಯಲ್ಲಿ ಆಗಾಗ ಮಿಂಚು ಮಿಂಚಿ ಮಾಯವಾಗ್ತಾ ಇತ್ತು. ಅಡುಗೆ ಮನೆಯಲ್ಲಿ ನೀರು ಕುಡಿದು ಏದುಸಿರು ಬಿಡ್ತಾ ಗೋಡೆಗೆ ಒರಗಿ ಸುಧಾರಿಸಿಕೊಳ್ತಿದ್ದ. ಇದ್ದಕಿದ್ದ ಹಾಗೆ ಆ ಪಾಳುಮನೆಯಲ್ಲಿ ಕೇಳಿದ ಹೆಂಗಸಿನ ನರಳುವ ದನಿ ಮತ್ತೆ ಇವನ ಮನೆಯಲ್ಲೇ ಕೇಳೊದಕ್ಕೆ ಶುರುವಾಯ್ತು. ಈಗಂತು ಎಷ್ಟು ಹೆದರಿದ ಅಂದರೆ ನೀರು ಮಂಜುಗಡ್ಡೆ ಆಗೋ ಹಾಗೆ ಅವನ ಮೈಯಲ್ಲಿ ರಕ್ತ ಸಂಚಾರ ನಿಂತುಹೋಗಿ ಅದೂ ಕೂಡ ಮಂಜುಗಡ್ಡೆಯ ಹಾಗೆ ಘನೀಕರಿಸ್ತಾ ಇದೆಯೊ ಏನೋ ಅನ್ನುವ ಅನುಭವವಾಯ್ತು.

ಅಡುಗೆ ಮನೆಯಿಂದ ಹೊರಬಂದವನಿಗೆ ಅವನ ತಾಯಿ ಮಲಗೋ ಕೋಣೆಯಿಂದ ನರಳೋ ಶಬ್ದ ಬರೋದು ಕೇಳಿಸ್ತು, ಸೀದ ಆ ಕೋಣೆ ಹತ್ರ ಹೋಗ್ತಾನೆ. ಆ ಬಾಗಿಲನ್ನ ನೋಡುವಾಗ ಅವನ ಭಯ ಮತ್ತೆ ಜಾಸ್ತಿಯಾಗುತ್ತೆ, ಯಾಕಂದ್ರೆ ಕನಸಿನಲ್ಲಿ ನೋಡಿದ ಬಾಗಿಲು ಕೂಡ ಅದೇ…. ನಿಧಾನಕ್ಕೆ ಬಾಗಿಲನ್ನ ತೆರಿತಾನೆ, ಆ ಕೋಣೆಗೂ ಅವನು ಕನಸಿನಲ್ಲಿ ನೋಡಿದ ಕೋಣೆಗೂ ಏನು ವ್ಯತ್ಯಾಸ ಇರಲಿಲ್ಲ, ಅದೇ ದೀಪ…. ಅದೇ ಮಂಚ….. ಅವನ ಕನಸಲ್ಲಿ ನೋಡಿದ್ದು ಅಮ್ಮನ ಇದೇ ಕೋಣೆಯನ್ನ ಅಂತ ನೆನಪಾಯ್ತು. ಆದರೆ ಒಳಗೆ ಹೋಗೋಕೆ ಭಯ, ಆ ಹುಚ್ಚಾನು ಅಲ್ಲಿರ ಬಹುದಾ ಅನ್ನೊ ಭಯ. ಕೋಣೆಯ ಸುತ್ತ ಟಾರ್ಚ್ ಲೈಟ್ ಬಿಡ್ತಾನೆ, ಮಂಚದ ಮೇಲಿದ್ದ ಅಮ್ಮನನ್ನ ಬಿಟ್ಟರೆ ಮತ್ಯಾರು ಕಾಣಲಿಲ್ಲ. ಸ್ವಲ್ಪ ನಿರಾಳ ಆಯ್ತು, ಮೆಲ್ಲಗೆ ಕೋಣೆ ಒಳಗಡೆ ಹೋಗಿ ಮತ್ತೋಮೆ ನೋಡಿದ ಅಲ್ಲಿ ಯಾರು ಇರಲಿಲ್ಲ. ಅವನ ಅಮ್ಮ ನಿದ್ದೆಯಲ್ಲಿ ನರಳುತ್ತಾ ಇದ್ದದ್ರಿಂದ ಇವನು ಅಲ್ಲಿ ಬಂದದ್ದು ಗೊತ್ತಾಗಲಿಲ್ಲ.

ಸಂಜೆಯಿಂದ ಅಗ್ತಾ ಇದ್ದದನ್ನ ನೆನೆಸಿಕೊಂಡು ತಲೆ ಚಿಟ್ಟು ಹಿಡಿದಿತ್ತು. ನೇರವಾಗಿ ಬಂದು ಅವನ ಮಂಚದ ಮೇಲೆ ಬಿದ್ದುಕೊಂಡ, ದೇವರ ಧ್ಯಾನ ಮಾಡ್ತಾ ಮಾಡ್ತಾ ಸ್ವಲ್ಪ ಹೊತ್ತಲ್ಲಿ ಮತ್ತೆ ನಿದ್ದೆಗೆ ಜಾರಿಕೊಂಡ.

***

ಬೆಳಗ್ಗೆ ಎದ್ದವಿನಿಗೆ ರಾತ್ರಿಯ ಕನಸು, ಆ ಹುಚ್ಚ, ಪಾಳುಮನೆ ಮನೆಯ ಚಿಂತೆ ಬಿಟ್ಟರೆ ಅಮ್ಮನ ಬೆನ್ನು ನೋವಾಗಲಿ, ಮಾತ್ರೆಯ ವಿಷಯವಾಗಲಿ ನೆನಪೇ ಇರಲಿಲ್ಲ. ಎದ್ದವನೇ ಸ್ನಾನ ಮಾಡಿ ಕೆಲಸಕ್ಕೆ ಹೊರಡೊದಕ್ಕೆ ಸಿದ್ದನಾದರೂ ಒಂಥರಾ ತಲೆಯೆಲ್ಲಾ ಭಾರ ಭಾರ ಅನ್ನಿಸ್ತಿತ್ತು. ಅಡುಗೆ ಮನೆಗೆ ಬಂದು ತಿಂಡಿಗೆ ಅಂತ ಕೂತ, ಅವನು ಬರುವ ಮೊದಲೇ ಅಮ್ಮ ತಟ್ಟೆ ಇಟ್ಟು ಸಿದ್ದ ಮಾಡಿ ಬಡಿಸೋಕೆ ಅಂತ ಅವರು ಕೂತಿದ್ರು. ಏನು ಮಾತಾಡದೆ ತಿಂಡಿ ಶುರು ಹಚ್ಚಿಕೊಂಡ

“ಜ್ವರ ಹೇಗಿದೆ…..” ಅಂತ ಕೇಳ್ತ ಹಣೆ ಮೇಲೆ ಕೈಯಿಟ್ಟು ನೋಡಿದ್ರು. ರಾತ್ರಿ ನೆನಗಡಿಯನ್ನೇ ಜ್ವರ ಅಂತ ಸುಳ್ಳು ಹೇಳಿದ್ದು ನೆನಪಾಗಿ

“ಮಾತ್ರೆ ತೆಗೊಂಡೆ ಅಲ್ವ…. ಪರ್ವಾಗಿಲ್ಲ” ಅಂದ

“ಲೋ ನನ್ ಮಾತ್ರೆ ಮರಿ ಬೇಡ ಕಣೊ, ರಾತ್ರಿಯೆಲ್ಲಾ ತುಂಬಾ ನೋವಿತ್ತು….” ಹಿಂದಿನ ದಿನ ರಾತ್ರಿ ಮಾತ್ರೆ ತರ್ಲಿಲ್ವಲ್ಲ ಅಂತ ಬೇಸರಿಸಿಕೊಂಡ ಇದೆ ಪಾಣಿ. ಇವತ್ತು ಮಾತ್ರೆ ವಿಷ್ಯ ತೆಗೆದಿದ್ದು ಅವನಿಗೆ ಕಿರಿಕಿರಿ ಆಯ್ತು.

“ಆಆಆಯ್ತಮ್ಮ….. ತಿಂಡಿನಾದ್ರು ತಿನ್ನೋಕೆ ಬಿಡು”   ಅಂತ ತನ್ನ ಉಡಾಫೆ ಬುದ್ದಿನ ಮತ್ತೆ ತೋರಿಸ್ದ. ಅಮ್ಮ ಏನು ಮಾತಾಡ್ಲಿಲ್ಲ ಸುಮ್ಮನಾದ್ರು. ತಿಂಡಿ ತಿಂತ ಪಕ್ಕದಲ್ಲಿದ್ದ ಕಾಫಿ ಬಾಯಿಗಿಟ್ಟ, ಒಂದು ಗುಟುಕು ಕುಡಿದವನೇ “ಥತ್……” ಅಂತ ಲೋಟವನ್ನ ನೆಲಕ್ಕೆ ಕುಕ್ಕಿದ.

“ಸಕ್ಕರೇನೆ ಹಾಕಿಲ್ಲ….. ಒಂದು ಕಾಫಿ ನೆಟ್ಟಗೆ ಮಾಡೊಕೆ ಬರೊಲ್ಲ ನಿಂಗೆ”

“ಇಲ್ಲ ಕಣೊ ಅದು ಮರ್ತು ಹೊಯ್ತು…. ಇರು ಹಾಕ್ತಿನಿ” ಅಂತ ಸೊಂಟ ಹಿಡ್ಕೊಂಡು ಅಮ್ಮ ನಿಧಾನಕ್ಕೆ ಎದ್ರು.

“ಏನು ಬೇಕಾಗಿಲ್ಲ…. ಕಾಫಿನು ಬೇಡ ತಿಂಡಿನು ಬೇಡ…. ನಂಗಾದ್ರೆ ಮಾತ್ರೆ ತರೊಕೆ ಮರ್ತು ಹೋಯ್ತು ಅಂದ್ರೆ ಏನೇನೊ ಮಾತಾಡ್ತಿಯ…..ನೀನು ಕಾಫಿಗೆ ಸಕ್ಕರೆ ಮರ್ತು ಹೊಯ್ತು ಅಂತೀಯ ಛೆ…..” ಅಂತ ಸಿಟ್ಟಿಂದ ಎದ್ದು ಸೀದ ತನ್ನ ರೂಂ ಗೆ ಹೋದ ಕೆಲಸಕ್ಕೆ ಹೋಗೋಕೆ ಬಟ್ಟೆ ಬದಲಾಯಿಸಿ ಮನೆಯಿಂದ ಹೊರಟ. ಅಡುಗೆ ಮನೆಯಲ್ಲಿದ್ದ ತಾಯಿಗೆ ಮುಂದಿನ ಬಾಗಿಲು ಡಬ್ ಅನ್ನೊದು ಕೇಳಿಸ್ತು.

‘’ಇವನು ಎಷ್ಟು ಹೇಳಿದ್ರು ಬದಲಾಗೊ ಬುದ್ದಿ ಅಲ್ಲ ಇವಂದು” ಮಗನ ಹಠ, ಕೋಪ ಗೊತ್ತಿದ್ದ ಅಮ್ಮ ತಮ್ಮಲ್ಲೆ ಬಯ್ಕೊಂಡ್ರು.
ದಾರಿಯಲ್ಲಿ ನಡಕೊಂಡು ಹೋಗ್ತಾ ನಿನ್ನೆ ರಾತ್ರಿ ಇದೇ ರಸ್ತೇನಲ್ಲಿ ಹೆದರಿಕೊಂಡು ಓಡಿದ್ದು ನೆನಪಾಗಿ ತನ್ನಲ್ಲೆ ನಗ್ತಾ ಮುಂದೆ ಹೊದ, ಕೊಳ್ಳಿದೆವ್ವ ಸ್ಟ್ರೀಟ್ ಲೈಟ್ ಬೆಳಗ್ಗೆನು ಆನ್ ಆಫ್-ಆನ್ ಆಫ್ ಆಗ್ತಾ ಇತ್ತು. ಮುಂದೆ ಪಾಳು ಮನೆಹತ್ರ. ಬಂದ ರಾತ್ರಿಗಿಂತ ಬೆಳಕಲ್ಲೆ ಆ ಹಾಳು ಮನೆ ಚೆನ್ನಾಗಿ ಕಾಣಿಸ್ತಿತ್ತು. ಬಾಗಿಲ ಮೇಲಿನ ಲೈಟ್ ಇನ್ನೂಕೂಡ ಉರಿತಾ ಇತ್ತು. ಇಷ್ಟು ವರ್ಷ ಅದೇ ರಸ್ತೆಯಲ್ಲಿ ಓಡಾಡಿದಾನೆ ಆ ಮನೆಯನ್ನ ನೋಡಿದಾನೆ ಆದರೆ ನಿನ್ನೆ ಹೆದರಿಕೊಂಡಷ್ಟು ಯಾವತ್ತು ಅವನು ಹೆದರಿರ್ಲಿಲ್ಲ. ಹಾಗೆ ಮುಂದೆ ನಡೀತ ನಡೀತ ಮೆಡಿಕಲ್ ಎದುರು ಬಂದ ಅದು ಇನ್ನೂ ಓಪನ್ ಆಗಿರ್ಲಿಲ್ಲ.

“ಛೆ…. ನಿನ್ನೆ ರಾತ್ರಿ ನರಳಾಡ್ತಾ ಇದ್ರು ಅಮ್ಮ…. ಇವತ್ತು ಬೆಳಗ್ಗೆ ಬೇರೆ ರೇಗಾಡಿ ಬಿಟ್ಟೆ…. ಸಕ್ಕರೆ ಹಾಕಿಲ್ಲಾ ಅಂತ ರಾಕ್ಷಸನತರ ಆಡ್ಬಿಟ್ಟೆ…. ಯಾಕ್ ಆಥರ ಕೋಪ ಬಂತೋ ಏನೊ….” ಅಂತ ಅಮ್ಮನ ಬಗ್ಗೆ ಯೋಚಿಸ್ತಾ ಮುಂದೆ ಹೋದ. ಮುಂದೆ ದೇವಸ್ಥಾನ ಬಂತು ಅಲ್ಲೆ ಪಕ್ಕದ ಟೀ ಅಂಗಡಿಯಲ್ಲಿ ನಿನ್ನೆ ನೋಡಿದ ಉದ್ದ ಗಡ್ಡದ ಹುಚ್ಚ ಟೀ ಬನ್ ಗೋಸ್ಕರ ಜಗಳ ಆಡ್ತಾ ಇದ್ದದ್ದು ಕಾಣಿಸ್ತು. ದೇವಸ್ಥಾನದ ಬಾಗಿಲ ಹತ್ರ ಆಗತಾನೆ ಬೆಳಗಿನ ಪೂಜೆ ಮುಗಿಸಿಕೊಂಡು ಮುಖ್ಯ ಅರ್ಚಕರು ಬರ್ತಾ ಇದ್ರು. ಅವರು ಇವನ ತಂದೆಯ ಹಳೆ ಗೆಳೆಯ. ಹತ್ತಿರ ಬರ್ತಾ ಇದ್ದ ಹಾಗೆ.

“ನಮಸ್ಕಾರ ಆಚಾರ್ರೆ…….”

“ಓ ಪಾಣಿ ಏನೊ ಸಮಾಚಾರ…. ಜಾಸ್ತಿ ಕಾಣೊಕೆ ಸಿಗಲ್ವಲ್ಲ ನೀನು???” ಅಂತ ಮಾತಿಗಿಳಿದ್ರು.

“ಇಲ್ಲ ಇದೆ ರಸ್ತೇಲಿ ಓಡಾಡೊದು……. ಇವತ್ತು ಸ್ವಲ್ಪ ಬೇಗ ಹೊರಟೆ” ಅಂದ

“ಹೌದು…. ಬಸ್ ಹೊರಡೊದು ಸ್ವಲ್ಪ ಹೊತ್ತಿದೆ ಅಲ್ವ????..... ಸರಿ ದೇವಸ್ಥಾನಕ್ಕೆ ಬಾ ಪ್ರಸಾದ ತೆಗೊಂಡು ಹೋಗು” ಅಂತ ಮತ್ತೆ ದೇವಸ್ಥಾನದ ಕಡೆಗೆ ಹೊರಟ್ರು. “ನಿನ್ನ ತಂದೆ ಇದ್ದಗ ದಿನಾ ಬಂದು ಮಾತಾಡಿಸಿ ಪ್ರಸಾದ ತೆಗೊಂಡು ಹೋಗ್ತಿದ… ಹ ಹ ಹ…” ಅಂತ ಅವರು ಮುಂದೆ ಹೋಗ್ತಿದ್ರೆ, ಇವನು ಆವರ ಹಿಂದೆ ಕೋಲೆ ಬಸವನ ಹಾಗೆ ತಲೆ ಅಲ್ಲಾಡಿಸಿಕೊಂಡು ಹೋದ.
ಗರ್ಭ ಗುಡಿ ಹತ್ರದಿಂದ ದೇವಿಗೆ ಕೈ ಮುಗಿದು ತೀರ್ಥ, ಪ್ರಸಾದ ತೆಗೊಂಡು ಅಲ್ಲೆ ಜಗಲಿಯ ಮೇಲೆ ಕೂತ್ಕೊಂಡ. ಅಚಾರ್ರು ಕೂಡ ಮತ್ತೆ ಅವನ ಪಕ್ಕ ಬಂದ್ರು

“ಅಮ್ಮ ಚೆನ್ನಾಗಿದರ……………..” ಅಂತ ಅವನ ಪಕ್ಕದಲ್ಲಿ ಕೂತ್ಕೊಂಡ್ರು.

“ಹಾಂ…. ಚೆನ್ನಾಗಿದಾರೆ” ಅಂತ ಸಪ್ಪೆ ಮುಖಮಾಡ್ಕೊಂಡು ಹೇಳಿದ. ಅವನ ಮುಖ ನೋಡಿ

“ಏನೋ ಹುಷಾರಿಲ್ವ???? ಮುಖ ಒಂಥರಾ ಇದೆ???? ಏನಾದ್ರು ಸಮಸ್ಯೆನ??? ಮುಖದಲ್ಲಿ ಏನೊ ಭಯ, ಆತಂಕ ಕಾಣ್ತಾ ಇದೆ…. ಅಮ್ಮ ನಿಜವಾಗಲೂ ಹುಷಾರಾಗಿದಾರೆ ತಾನೆ???” ಅಂತ ಕೇಳಿದ್ರು.

“ ಅದೇನೋ ಗೊತಿಲ್ಲ ಆಚಾರ್ರೆ ನಿನ್ನೆ ರಾತ್ರಿ ಒಂದು ಕೆಟ್ಟ ಕನಸು ಬಿದ್ದಿತ್ತು…. ಅಮ್ಮನಿಗೆ ಹುಷಾರಿಲ್ಲದೇ ಇರೋ ಹಾಗೆ… ಯಾವುದೋ ಹಾಳು ಮನೆಗೆ ಹೋದಹಾಗೆ…. ಇಲ್ಲಿ ತನಕ ನನ್ನ ಜೀವಮಾನದಲ್ಲಿ ಇಷ್ಟು ಹೆದರಿರ್ಲಿಲ್ಲ ನಾನು, ಆ ಕನಸು ಬಿದ್ದ ಮೇಲೆ ಯಾಕೋ ನೆಮ್ಮದಿನೆ ಇಲ್ಲ….”

ಅಚಾರ್ರು ಅವನನ್ನೇ ನೋಡಿ ಏನೊ ಯೊಚನೆ ಮಾಡಿ ಅಲ್ಲಿಂದ ಮತ್ತೆ ದೇವಸ್ಥಾನದ ಒಳಗಡೆ ಹೋದ್ರು. ಸ್ವಲ್ಪ ಹೊತ್ತು ಬಿಟ್ಟು ಬಂದವರು ಅವನ ಕೈಗೆ ಒಂದು ದಾರ ಕಟ್ಟಿದ್ರು.

“ಇದು ಪೂಜೆ ಮಾಡಿದ ದಾರ…. ಇದರ ಮೇಲೆ ನಂಬಿಕೆ ಇಟ್ಟರೆ ಇದು ನಿನ್ನ ಕಾಪಾಡುತ್ತೆ…. ನೀನು ಹೇಳೊದು ನೋಡಿದ್ರೆ ಏನೋ ನೋಡಿ ಹೆದರಿ ಕೊಂಡ ಹಾಗಿದೆ…. ಧೈರ್ಯವಾಗಿರು ಏನಾಗಲ್ಲ” ಅಂದ್ರು, ಅಷ್ಟು ಹೊತ್ತಿಗೆ ದೇವಸ್ಥಾನದ ಬಾಗಲಲ್ಲಿ ಯಾರೊ ಯಾರನ್ನೋ ಬಯ್ಯೊದು ಕೇಳಿಸ್ತು. ದೇವಸ್ಥಾನದ ಪಹರೆಯವನು ಆ ಹುಚ್ಚನನ್ನ ಬಾಗಿಲಿಂದ ಬಲವಂತವಾಗಿ ಹೊರಗೋಡಿಸ್ತಾ ಇದ್ದ.

“ಅವನು ಯಾರು ಹುಚ್ಚಾನ????” ಆಚಾರನ್ನ ಪ್ರಶ್ನೆ ಮಾಡಿದ.

“ಪಾಪ…. ಅವನ ಕಥೆನೆ ಬೇರೆ…. ಹೇಗಿದ್ದ ಹೇಗಾಗ್ಬಿಟ್ಟ….. “ ಅಚಾರ್ರ ಮಾತು ಕೇಳಿ

“ಏನ್ ಕಥೆ……???” ಅಂತ ಕುತೂಹಲದಿಂದ ಪಾಣಿ ಮತ್ತೆ ಪ್ರಶ್ನೆ ಮಾಡಿದ.

“ಅವನ ಮಾಡಿದ ತಪ್ಪು ಅವನನ್ನ ಹುಚ್ಚನನ್ನಾಗಿಸ್ತು……….” ಆಚಾರ್ರು ಮತ್ತೆ ಪಕ್ಕದಲ್ಲಿ ಕೂತು ಕಥೆ ಮುಂದುವರೆಸಿದ್ರು.

“8 ವರ್ಷದ ಹಿಂದಿನ ಕಥೆ….. ಇವನ ಅಪ್ಪ ಗಿರಿಸಾಗರದಲ್ಲಿ ಇದ್ಯಲ್ಲ ಕೋ-ಓಪರೇಟಿವ್ ಬ್ಯಾಂಕ್, ಅದರ ಮೊದಲ ಮೇನೆಜರ್. ತುಂಬ ಪಾಪದ ಮನುಷ್ಯ. ಅದಕ್ಕೆ ಸರಿಯಾಗಿ ಅವನ ಹೆಂಡತಿ ಇವನ ತಾಯಿ ತುಂಬಾ ಗುಣವಂತೆ. ಈ ಹುಚ್ಚಾ ಇದಾನಲ್ವ ಇವನು ಅವರ ಒಬ್ಬನೇ ಮಗ ಬಾಲಕೃಷ್ಣ. ತುಂಬಾ ಬುದ್ದಿವಂತ. ಹತ್ತು ವರ್ಷದ ಹಿಂದೆ ರೈಲು ಅಪಘಾತದಲ್ಲಿ ಇವನ ಅಪ್ಪ ತೀರಿಕೊಂಡ್ರು. ಪಾಪ ಆವಾಗ ಇವನಿಗೆ ಬರೇ 19 ವರ್ಷ. ಮನೆ ಜವಾಬ್ದಾರಿ ತೆಗೊಳೊ ಅನುಭವನೂ ಅವನಿಗೆ ಇರಲಿಲ್ಲ, ಇವನ ಅಪ್ಪ ಸಮಾಜಕ್ಕೆ ಮಾಡಿದಷ್ಟು ಸಹಾಯಾ ಅವನ ಮನೆಗೂ ಮಾಡಿರ್ಲಿಲ್ಲಿ, ಅವರ ಸಾವು ಅಕ್ಷರ ಸಹ ಅಮ್ಮಾ ಮಗನನ್ನ ಬೀದಿಗೆ ತಂದು ಬಿಡ್ತು.

ಆದರೆ ಜೀವನಕ್ಕೆ ಏನಾದ್ರು ಆಗಬೇಕಲ್ಲ ಈ ಹುಡುಗ ಬೆಳಗ್ಗೆ ಕಾಲೇಜ್ ಹೋಗಿ ಸಂಜೆ ನಾಲ್ಕೈದು ಅಂಗಡಿಯಲ್ಲಿ ಲೆಕ್ಕ ಬರೆಯೋ ಕೆಲಸ ಮಾಡ್ತಾ ಇದ್ದ. ಎರಡು ವರ್ಷದಲ್ಲಿ ಡಿಗ್ರಿ ಪಾಸ್ ಮಾಡ್ಕೊಂಡ.  ಮಂಜಿನ ಕೊಪ್ಪದಲ್ಲಿ ಆಗ ಒಂದೂ ಬ್ಯಾಂಕೇ ಇರಲಿಲ್ಲ ಎಲ್ಲಾದಕ್ಕೂ ಗಿರಿಸಾಗರಕ್ಕೇ ಹೋಗ ಬೇಕಿತ್ತು. ಈಗ ಸ್ವಲ್ಪ ವರ್ಷದ ಹಿಂದೆ ಒಂದು ಪ್ರೈವೇಟ್ ಬ್ಯಾಂಕ್ ನವರು ಇಲ್ಲಿ ಬ್ರಾಂಚ್ ತೆರೆದ್ರು. ಈ ಹುಡುಗ ಚೆನ್ನಾಗಿ ಓದಿಕೊಂಡಿದ್ದ ಬೇರೆ, ಅವರೆ ಕರ್ದು ಕೆಲಸ ಕೊಟ್ರು. ಅಲ್ಲಿಂದ ನಂತರ ಜೀವನ ಸ್ವಲ್ಪ ದಾರಿಗೆ ಬಂತು. ಚಿಕ್ಕ ಮನೆಯಲ್ಲಿದ್ದವರು ಬೇರೆ ಮನೆಗೆ ಬದಲಾಯಿಸಿದ್ರು, ಅದೇ ನಿಮ್ಮ ಮನೆ ದಾರಿಯಲ್ಲಿ ಒಂದು ಪಾಳು ಮನೆ ಇದ್ಯಲ್ವ???? ಅದೇ ಮನೆ….”

ಪಾಳು ಮನೆ ಅಂದ ತಕ್ಷಣ ಇವನ ಕಿವಿ ನೆಟ್ಟಗಾಯ್ತು. “ಆ ಬಾಗಿಲು ಮುರ್ಕೊಂಡು ಬಿದ್ದಿದೆ ಅಲ್ವ ಆ ಮನೆನ???”

“ಅದೇ ಮನೆ….. ನಾನು ಹೇಳಿದ್ದೆ ವಾಸ್ತು ಸರೀ ಇಲ್ಲ ಇರೋ ಆ ಮನೆ ಬೇಡ ಅಂತ…. ಜೊತೆಗಿದ್ದ ಅವನ ಅಮ್ಮಾನು ಹೇಳಿದ್ರು ಬೇಡ ಈ ಮನೆ ಅಂತ, ಈಗಿನ ಹುಡುಗರು ಕೇಳ ಬೇಕಲ್ಲ, ಅವನು ಒಂಥರ ಹಠಮಾರಿ ಮಾತು ಕೇಳಲೇ ಇಲ್ಲ, ಅದೇ ಮನೆಗೆ ಅಮ್ಮಾ ಮಗ ಬಂದು ಬಿಟ್ಟ್ರು….. ಆ ಮೇಲೆ ಆಗಿದ್ದು ಕೇಳಿದ್ರೆ …..” ಅಂತ ಮಾತು ನಿಲ್ಲಿಸಿ ಬಿಟ್ರು. ಪಾಣಿ ಎಂಜಲು ನುಂಗಿಕೊಂಡ.

“ಏನಾಯ್ತು ಆ ಮೇಲೆ….????” ಪಾಣಿಗೆ ಒಂದುಅ ಕಡೆ ಕುತೂಹಲ, ಇನ್ನೊಂದು ಕಡೆ ಕನಸಿನಲ್ಲಿ ಕಂಡ ಮನೆಯಾದ್ದರಿಂದ ಭಯ.

“ ಅವನನ್ನ ಚಿಕ್ಕ ವಯಸ್ಸಿನಿಂದ ನೋಡ್ತಾ ಇದಿನಿ, ನಿನ್ನ ಥರಾನೆ ಹಠ, ಕೋಪ, ಅವನು ಹೇಳಿದ್ದೇ ಆಗಬೇಕು ಅನ್ನೊ ಬುದ್ದಿ”
ಇದನ್ನ ಕೇಳಿ ಪಾಣಿ ತಲೆ ತಗ್ಗಿಸಿ

“ಆಚಾರ್ರೆ …. ಅದೂ ಹಠ ಅಂದ್ರೆ…..” ಅಂತ ಪಾಣಿ ಏನೋ ಹೇಳೊಕೆ ಶುರು ಮಾಡಿದ.

“ನಿನ್ನ ವಿಚಾರ ಬಿಡು…. ಇವನು ಸ್ವಲ್ಪ ವಿಚಿತ್ರ….. ಒಂದು ಕಡೆಅ ಇವನಿಗೆ ಅಮ್ಮಾ ಅಂದ್ರೆ ತುಂಬಾನೆ ಇಷ್ಟ, ಆದರೆ ಸಿಟ್ಟು ಬಂತು ಅಂದ್ರೆ ಅದೆ ಅಮ್ಮನನ್ನೇ ಬಯ್ತಾ ಇರ್ತಾನೆ, ಏನ್ ವಿಷ್ಯಾ ಇದ್ರೂನು ಅಮ್ಮನ ಹತ್ರ ಹೇಳಲೇ ಬೇಕು, ಅಮ್ಮನನ್ನ ಬಿಟ್ರೆ ಮನಸು ಬಿಚ್ಚ್ಚಿ ಮಾತಾಡೊ ಯಾವ ಸ್ನೇಹಿತರಾಗಲಿ ಆಪ್ತರಾಗ್ಲಿ ಯಾರು ಇರಲಿಲ್ಲ, ಅಮ್ಮಾನೆ ಎಲ್ಲ. ಸಿಟ್ಟು ಬಂದ್ರೆ ಎರಡು ಮೂರು ದಿವಸ ಅಮ್ಮನ ಹತ್ರ ಮಾತು ಬಿಡ್ತಿದ್ದ, ಮತ್ತೆ ಅವನೇ ಮಾತಾಡಿಕೊಂಡು ಹೋಗ್ತಿದ್ದ, ಸಂತೋಷ ಆಗಲಿ ದುಃಖ ಆಗಲಿ ಏನಿದ್ರು ಅಮ್ಮನ ಹತ್ರ ಹೇಳಿ ಬಿಡ್ತಿದ್ದ, ಮನಸಲ್ಲಿ ಏನು ಇಟ್ಕೊತಿರ್ಲಿಲ್ಲ.

ಕೆಲಸಕ್ಕೆ ಸೇರಿ ಅವನಲ್ಲಾಗಿದ್ದ ಬದಲಾವಣೆ ಅಂದ್ರೆ, ಕೆಲಸದ ಭರದಲ್ಲಿ ಮನೆ ಕಡೆ ಸಮಯ ಕೊಡೋದು ಕಡಿಮೆ ಆಯ್ತು. 6-7 ಗಂಟೆಗೆಲ್ಲಾ ಮನೆಗೆ ಬರ್ತಾ ಇದ್ದವನು ಕ್ರಮೇಣ 8:30, 9:00, 9:30 ಹೀಗೆ ತಡವಾಗಿ ಬರೋಕೆ ಶುರುಮಾಡಿದ, ಅದರೆ ತಾಯಿ ಹತ್ರ ಮಾತಾಡೊದು, ಜಗಳ ಆಡೊದು, ಮಾತು ಬಿಡೋದು ಮತ್ತೆ ಮಾತಾಡೊದು ಆಗ್ತಾನೆ ಇತ್ತು. ಆದರೆ ಈ ಬಾರಿ ಅಮ್ಮಾ ಮಗನ ಗ್ರಹಚಾರ ಸರಿ ಇರ್ಲಿಲ್ಲಾ ಅನ್ಸುತ್ತೆ, ಹೊಸ ಮನೆಗೆ ಬಂದು ಹತ್ರತ್ರ ಒಂದು ವರ್ಷಾ ಆಗಿತ್ತು. ಮನೆ ಮುಂದುಗಡೆ ಬಾಗಿಲಿಗೆ ಇದ್ದದ್ದು ಒಂದೆ ಚಿಲಕ ಅದೂ ಬಾಗಿಲ ತುದಿಯಲ್ಲಿ, ಶುರುವಾತಿನಲ್ಲಿಯೇ ಅವನ ಅಮ್ಮ ಬಾಗಿಲಿನ ಮಧ್ಯೆ ಅಡ್ಡ ಚಿಲಕ ಮಾಡಿಸ ಬೇಕು ಅಂತ ಹೇಳಿದ್ರು. ಆದ್ರೆ ಇವನು ಆ ವಿಷಯ ತಲೆಗೇ ಹಾಕಿಕೊಳ್ಳಲಿಲ್ಲ. ಒಂದು ವರ್ಷದಲ್ಲಿ ಇದ್ದ ಒಂದು ಚಿಲಕವೂ ಕೂಡ ಬಲಹೀನವಾಗಿತ್ತು. ಹೊರಗಡೆಯಿಂದ ಯಾರಾದ್ರು ಬಲವಾಗಿ ದೂಡಿದ್ರೆ ತೆರೆದು ಕೊಳ್ಳೊವಷ್ಟು ದುರ್ಬಲವಾಗಿತ್ತು. ಅವತ್ತು ಅವನ ಅಮ್ಮ

“ಬಾಲು…..ಮುಂದುಗಡೆ ಬಾಗಿಲು ಚಿಲಕ ಬದಲಾಯಿಸ ಬೇಕು ಅನ್ಸುತ್ತೆ, ತುಂಬಾ ಸಡಿಲ ಆಗಿದೆ, ಜೋರಾಗಿ ತಳ್ಳಿ ಬಿಟ್ಟರೆ ಆರಾಮಾಗಿ ತೆರ್ಕೊಳ್ಳುತ್ತೆ ಕಣೋ”

“ಒಂದು ವರ್ಷಾನು ಆಗಿಲ್ಲ ಅದು ಹೇಗೆ ಹಾಳಾಗುತ್ತೆ???? ಅವಾಗಾವಾಗ ಲೆಕ್ಕಕ್ಕಿಂತ ಜಾಸ್ತಿ ಹಾಕೋದು ತೆರೆಯೋದು ಮಾಡಿರ್ತೀಯ ಅದಕ್ಕೆ ಹಾಳಾಗಿರುತ್ತೆ” ಅಂತ ಅಮ್ಮನಿಗೆ ದಬಾಯಿಸಿದ್ದ.

“ರಾತ್ರಿ ನೀನು ಬರೋವರೆಗೂ ನಾನು ಒಬ್ಬಳೆ ಅಲ್ವೇನೊ ಇರೋದು, ಯಾವಗಲೂ ಬಾಗಿಲಿ ಹಾಕೊಂಡೆ ಇರ್ತೀನಿ, ಯಾರಾದ್ರು ಬಂದಾಗ ಮಾತ್ರ ಬಾಗಿಲು ತೆರೆಯೋದು….. ಅದೂ ಅಲ್ಲದೆ ನೀನು ಇತ್ತೀಚಿಗೆ ಬರೋದು ತಡವಾಗ್ತಿದೆ, ಅಕ್ಕ ಪಕ್ಕದಲ್ಲಿ ಹತ್ತಿರ ಮನೇನು ಇಲ್ಲ, ಅಷ್ಟು ರಾತ್ರಿ ನಾನು ಒಬ್ಬಳೇ ಇರೋಕೆ ಭಯವಾಗುತ್ತೆ ನಂಗೆ”

‘ಓ….. ಹಾಗಂತ ಬ್ಯಾಂಕ್ ಕೆಲಸ ಬಿಟ್ಟು ಇಲ್ಲಿ ಬಂದು ಕೂತ್ಕೊ ಬೇಕ????? ಅದೆಲ್ಲಾ ಆಗಲ್ಲ….. ಅದೂ ಅಲ್ಲದೆ ಇಲ್ಲಿ ಯಾರದೂ ಭಯ ಇಲ್ಲ…. ರಿಪೇರಿ ಮಾಡಿಸ್ತೀನಿ ಬಿಡು….” ಅಂತ ಅಂದಿದ್ದ. ಒಂದುವಾರವಾದರೂ ರಿಪೇರಿ ಮಾಡಿಸಲೇ ಇಲ್ಲ, ಅವನ ಅಮ್ಮ ಅವಾಗವಾಗ ಹೇಳ್ತಾನೆ ಇದ್ರು. ಅವಾಗವಾಗ ಹೇಳಿದ್ದು ಕಿರಿ ಕಿರಿ ಆಯ್ತು ಅನ್ಸುತ್ತೆ. ಈ ವಿಷಯವಾಗಿ ಮತ್ತೆ ಅಮ್ಮನ ಹತ್ರ ಮಾತು ಬಿಟ್ಟ. ಎರಡು ವಾರ ಆಯ್ತು. ಇವನು ಹಠ ಬಿಡಲೇ ಇಲ್ಲ. ಬ್ಯಾಂಕ್ ನಲ್ಲಿ ಇವನ ಕೆಲಸ ನೋಡಿ ಹೆಡ್ ಆಫಿಸ್ ನಿಂದ ಪ್ರಮೋಷನ್ ಆರ್ಡರ್ ಕೂಡ ಕೈಗೆ ಬಂದಿತ್ತು. ಅದನ್ನ ಅಮ್ಮನ ಹತ್ರ ಹೇಳ ಬೇಕು ಅನ್ನಿಸಿದ್ರು ಮೊಂಡು ಹಠದಿಂದ ಹೇಳಲೇ ಇಲ್ಲ, ಚಿಲಕ ರಿಪೇರಿನೂ ಮಾಡಿಸಲಿಲ್ಲ.

ಅವತ್ತಿಗೆ ಒಂದು ತಿಂಗಳು ಮೇಲಾಗಿತ್ತು ಮಾತು ಬಿಟ್ಟು, ಅಷ್ಟು ದಿನಗಳವರೆಗೆ ದೀರ್ಘವಾಗಿ ಮಾತು ಬಿಟ್ಟಿದ್ದು ಅದೇ ಮೊದಲು. 9:30 ತನಕ ಕೆಲಸಮಾಡಿ ಬ್ಯಾಂಕ್ ನಿಂದ ಹೊರಟ. ಇವತ್ತು ಅಮ್ಮನ ಹತ್ರ ಮಾತಾಡ ಬೇಕು ಅಂತ ಖುಷಿಯಿಂದ ಮನೆ ಹತ್ರ ಬಂದ. ಗೇಟ್ ತೆಕ್ಕೊಂಡು ಸ್ವಲ್ಪ ಒಳಗಡೆ ಹೋದವನು ಮಧ್ಯದಲ್ಲೇ ನಿಂತು ಬಿಟ್ಟ. ಕಣ್ಣ ಮುಂದಿದ್ದ ಮನೆಯನ್ನ ನೋಡಿ ಗಾಬರಿಯಿಂದ ಕೈಯಲ್ಲಿದ್ದ ಬ್ಯಾಗ್ ಕೆಳಗಡೆ ಬಿತ್ತು. ಮನೆಯ ಮುಂದಿನ ಒಂದು ಬಾಗಿಲು ಮುರಿದು ಬಿದ್ದಿತ್ತು. ಭಯದಿಂದ ಉಗುಳು ನುಂಗಿಕೊಂಡೆ ಒಳಗಡೆ ಹೋದ

ಭಯದಲ್ಲೇ   “ಅಮ್ಮಾ….. ………“ಅಂತ ಕೂಗಿದ ಪ್ರತಿಯಾಗಿ ಏನು ಉತ್ತರಾನೆ ಇಲ್ಲ. ಚಿಲಕ ಸರಿ ಮಾಡ್ಸು ಅಂತ ಅವನ ಅಮ್ಮ ಸಾರಿ ಸಾರಿ ಹೇಳಿದ್ದು ಈಗ ಕಿವಿಯಲ್ಲಿ ಗುಯ್ ಗುಡೊಕೊ ಪ್ರಾರಂಭ ಆಯ್ತು. ಒಳಗೆ ಹೋಗಿ ಎಡಭಾಗಲ್ಲಿರೋ ಕೊಣೆ ಬಾಗಿಲನ್ನ ನಿಧಾನಕ್ಕೆ ತೆರೆದ ಅಷ್ಟೆ……….”

ಆಚಾರ್ರು ತಮ್ಮ ದೀರ್ಘವಾದ ಕಥೆಯನ್ನ ನಿಲ್ಲಿಸಿ ಪಾಣಿಯ ಮುಖವನ್ನ ನೋಡಿದ್ರು. ಅವನು ಮತ್ತೆ ಹೆದರಿ ಬೆವತು ಹೋಗಿದ್ದ, ಅವನ ಮುಖದಲ್ಲಿ ಮುಂದೇನು ಅನ್ನೊ ಪ್ರಶ್ನೆಇತ್ತು.

“ಏನಾಯ್ತು ಆಚಾರ್ರೆ…… ರೂಂ ನಲ್ಲಿ ಏನಿತ್ತು????”

“ಅವನ ಅಮ್ಮ ರಕ್ತದ ಮಡುವಲ್ಲಿ ಬಿದ್ದಿದ್ಲು……. ಮೇಜು ಕುರ್ಚಿ, ಅಲ್ಮೇರ ಎಲ್ಲಾ ಚೆಲ್ಲಾಪಿಲ್ಲಿಯಾಗಿತ್ತು. ಮನೆಯಲ್ಲಿ ಹೆಂಗಸು ಒಬ್ಬಳೇ ಇರೋದು ಅಂತ ಗೊತ್ತಾಗಿ ಯಾರು ಕಳ್ಳರು ಬಾಗಿಲು ಮುರಿದು ಒಳಗೆ ನುಗ್ಗಿ ಅವಳನ್ನ ಕೊಲೆ ಮಾಡಿ ಎಲ್ಲಾ ದೋಚಿಕೊಂಡು ಹೋಗಿದ್ರು…….ಪಾಪ ಅವನ ತಾಯಿ…..” ಅನ್ನೊ ಹೊತ್ತಿಗೆ ಪಾಣಿ ಕಣ್ಣಲ್ಲಿ ನೀರು ತುಂಬಿಕೊಂಡಿ ಬಿಡ್ತು.
ಅಚಾರ್ರು ಮುಂದುವರೆಸ್ತಾ….. “ ಅದಿಕ್ಕೆ ದೊಡ್ಡವರ ಮಾತು ಕೇಳ ಬೇಕು ಅನ್ನೋದು, ವಾಸ್ತು ಸರಿ ಇಲ್ಲ ಅಂತ ನಾನ್ ಹೇಳಿದ್ದೆ, ಚಿಲಕ ಸರಿಮಾಡಿಸೂ ಅಂತ ಅಮ್ಮ ಹೇಳಿದ್ರು. ಆದರೆ ಅವನ ಹಠಕ್ಕೆ ಪಾಪದ ಅಮ್ಮ ಬಲಿಯಾದ್ರು…….

 ಬೆಳಗ್ಗೆ ಇದ್ದವಳು ರಾತ್ರೆ ಮನೆಗ ಬರೋವಾಗ ಸತ್ತು ಬಿದ್ದಿರೋದು ನೋಡಿ ಅವನ ಮನಸ್ಸಿಗೆ ಆಘಾತ ಆಯ್ತು. ಅಮ್ಮನ ಅಚಾನಕ್ ಅಗಲುವಿಕೆಯಿಂದ ಕುಗ್ಗಿ ಹೋದ, ದಿನಾ ದಿನಾ ಕೆಲಸ ಮೇಲೆ ಮೊದಲಿದ್ದ ಆಸಕ್ತಿ ಕಮ್ಮಿ ಆಯ್ತು, ಮಾತು ಬಿಟ್ಟ, ಒಂಟಿಯಾಗಿ ಇರೋಕೆ ಶುರುಮಾಡಿದ, ಒಂದು ತಿಂಗಳಿಂದ ಅಮ್ಮನ ಹತ್ರ ಮನಸ್ಸು ಬಿಚ್ಚಿ ಮಾತನಾಡ ಬೇಕು ಅಂತ ಇದ್ದ ಎಷ್ಟೊ ವಿಷಯ ಮನಸಲ್ಲೆ ಇತ್ತು. ಅದನ್ನೆ ನೆನಸಿಕೊಂಡು ಕೊರಗೋಕೆ ಶುರುಮಾಡಿದ, ಈಗ ಮಾತಾಡೊಕೆ ಅಮ್ಮ ಇಲ್ಲ, ಅಮ್ಮನಸಾವಿಗೆ ನಾನೆ ಕಾರಣ ಅನ್ನೊ ಅವನ ಯೋಚನೆ ಅವನಿಗೆ ಹುಚ್ಚು ಹಿಡಿಸಿ ಬಿಡ್ತು. ಒಂದೊಂದು ಸರ್ತಿ ನಗ್ತಾನೆ, ಅವಾಗಾವಗ ದೇವರ ಮುಂದೆ ಕೂತು ಅವನಿಗೆ ಪ್ರಮೋಷನ್ ಸಿಕ್ತು ಅದು ಇದು ಅಂತ ಅವನ ಅಮ್ಮನ ಹತ್ರ ಹೇಳದೆ ಇರೋದನ್ನೆಲ್ಲಾ ಅವನ ಪಾಡಿಗೆ ಹೇಳ್ತಾ ಜೋರಾಗಿ ಅಳೊಕೆ ಶುರುಮಾಡ್ತಾನೆ. ಅವನಿಗೆ ತನ್ನವರೂ ಅಂತ ಯಾರು ಇಲ್ಲ, ನನಗೆ ಸಿಗೋ ದೇವಸ್ಥಾನದ ನೈವೇದ್ಯದಲ್ಲೆ ಅವನಿಗೂ ಕೊಡ್ತಿನಿ. ತಿಂದು ಕೊಂಡು ಗಲಾಟೆ ಮಾಡಿಕೊಂಡು ಇಲ್ಲೇ ಅಡ್ಡಡ್ತಾ ಇರ್ತಾನೆ……..” ಅಂತ ಆಚಾರ್ರು ಅವನ ಕಥೆ ಮುಗಿಸಿದ್ರು.

ಕಥೆ ಕೇಳಿ ಚಕ್ರಪಾಣಿಗೆ ಅಳು ಬರೋ ಹಾಗಯ್ತು, ಆಚಾರ್ರಿಗೆ ಗೊತ್ತಾಗ ಬಾರದು ಅಂತ ಮುಖ ತಿರುಗಿಸಿ ಕಣ್ಣಿರು ಒರೆಸಿಕೊಂಡ.
“ಆಚಾರ್ರೆ ಬಸ್ ಗೆ ಟೈಮ್ ಆಯ್ತು……. ನಾನು ಹೊರಡ್ತೀನಿ” ಅಂತ ಹೇಳಿ ಅಚಾರ್ರು ಹಾಂ…. ಅಂತ ಹೇಳೊ ಮೊದಲೆ ಅಲ್ಲಿಂದ ಹೊರಟ, ಹೊರಗಡೆ ಆ ಹುಚ್ಚ ಬಾಲ ಕೃಷ್ಣ ಕೂತಿದ್ದ. ಆಕಾಶ ನೋಡಿಕೊಂಡು ಏನೋ ಮಾತಾಡ್ತಾ ಇದ್ದ….

***

ಹುಚ್ಚನ ಕಥೆ ಕೇಳ್ತಾ ಇದ್ದ ಹಾಗೆ ಪಾಣಿಗೆ ಎಲ್ಲೋ ತನ್ನ ಕಥೆಯನ್ನೇ ಕೇಳಿದ ಹಾಗಾಯ್ತು. ಇಡೀ ದಿವಸ ಅವನಿಗೆ ಸರಿಯಾಗಿ ಕೆಲಸ ಮಾಡೊಕೆ ಆಗಲಿಲ್ಲ, ಅಮ್ಮಾನೆ ಕಣ್ಣ ಮುಂದೆ ಬರ್ತಾ ಇದ್ದಳು. ರಾತ್ರಿ ನೋವಲ್ಲಿ ಅಮ್ಮ ನರಳಾಡೊ ಧ್ವನಿಯೇ ಮತ್ತೆ ಮತ್ತೆ ಕೇಳಿಸ್ತಾ ಇತ್ತು. ಮೂರು ದಿವಸದಿಂದ ಸುಳ್ಳು ಹೇಳ್ತಾ ಮಾತ್ರೆ ವಿಷಯವನ್ನ ತೇಲಿ ಹಾಕ್ತಾ ಇದ್ದ ತನ್ನ ಬಗ್ಗೆ ಒಂದು ರೀತಿ ಜಿಗುಪ್ಸೆ ಉಂಟಾಯಿತು.

ಆ ಬಾಲಕೃಷ್ಣನ ಹಾಗೆ ನಂಗೂ ಕೂಡ, ಅಮ್ಮ ಬಿಟ್ಟರೆ ನನಗಾರಿದಾರೆ???

ಬರೆ ನೆಗಡಿಗೆ ಮಾತ್ರೆ ತೆಗೊಂಡ ನನಗೆ, ಅಮ್ಮನ ನೋವು ಯಾಕೆ ಗೊತ್ತಾಗ್ಲಿಲ್ಲ???

ನನ್ನ ಜೀವನದಲ್ಲಿ ಎಷ್ಟು ಸಲ ನಾನು ಅಮ್ಮನಿಗೆ ನೋವು ಕೊಟ್ಟಿಲ್ಲ

ನಾನು ಮನುಷ್ಯನೋ ರಾಕ್ಷಸನೋ…???

ಇಲ್ಲ ನಾನು ಬದಲಾಗಬೇಕು….. ನನ್ನ ಸ್ವಾರ್ಥಕ್ಕೆ ಅವನ ತರ ನಾನು ಅಮ್ಮನನ್ನ ಕಳೆದುಕೊಳ್ಳೊದಿಕ್ಕೆ ನಾನು ತಯಾರಿಲ್ಲ
ಹೀಗೆ ಯೋಚನೆ ಮಾಡ್ತಾ ಅವತ್ತು ಆಫೀಸಿಂದ ಹೊರಟ, ಮಂಜಿನ ಕೊಪ್ಪದಲ್ಲಿ ಮಾತ್ರೆ ಸಿಗುತ್ತೋ ಇಲ್ಲವೋ ಅಂತ ಗಿರಿಸಾಗರದಲ್ಲೆ ಮಾತ್ರೆ ತೆಗೊಂಡು ಬಸ್ ಹತ್ತಿಕೊಂಡ, ಮಾಮೂಲಿಯಂತೆ 7 ಘಂಟೆಗೆ ಬಸ್ ಬಂತು. ದೇವಸ್ಥಾನದ ಹತ್ತಿರ ಬಂದ. ಆ ಹುಚ್ಚ ಹಿಂದಿನ ದಿನ  ಮಲಗಿದ್ದ ಜಾಗದಲ್ಲೇ ಮಲಗಿದ್ದ. ಏನನ್ನಿಸ್ತೋ ಏನೊ ಒಂದು ಪ್ಯಾಕ್ ಬನ್ ತೆಗೊಂಡು ಸೀದ ಹುಚ್ಚನ ಹತ್ತಿರ ಹೋದ, ಅವನು ಇವನನ್ನ ನೋಡಿ

“ನಮಸ್ಕಾರ ಸರ್…….’ ಅಂದ, ಪಾಣಿ ಏನು ಮಾತಾಡಲಿಲ್ಲ. ಬನ್ ಪ್ಯಾಕೇಟ್ ಅವನ ಕೈಗಿಟ್ಟು. “ಥ್ಯಾಂಕ್ಸ್ ನಿನ್ನ ನಾನ್ ಯವತ್ತೂ ಮರೆಯೊಲ್ಲ” ಅಂತ ಪಾಣಿ ಆ ಹುಚ್ಚನ ಕಡೆ ಸಣ್ಣ ನಗು ಬೀರಿದ. ಮತ್ತೆ ದೇವಸ್ಥಾನದ ಮುಂದೆ ಬಂದು ಕೈ ಮುಗಿದು ನಿಂತುಕೊಂಡ, ಪ್ರತೀ ದಿವಸ

“ದೇವರೆ ನಂಗೆ ಒಳ್ಳೆದು ಮಾಡಪ್ಪ” ಅಂತ ಕೇಳಿಕೊಳ್ತಿದ್ದ ಚಕ್ರಪಾಣಿ ಇವತ್ತು “ಅಮ್ಮಾ ತಾಯಿ ದುರ್ಗಾಪರಮೇಶ್ವರಿ ನನ್ನ ತಾಯಿ ಇನ್ನೂ ನೂರು ವರುಷ ಆಯಸ್ಸು ಕೊಟ್ಟು ಕಾಪಾಡಮ್ಮ” ಅಂತ ಹೇಳೊ ಹೊತ್ತಿಗೆ ಮತ್ತೆ ಕಣ್ಣು ಒದ್ದೆಯಾಯ್ತು. ಮತ್ತೆ ಮನೆ ಕಡೆ ದಾರಿ ಹಿಡಿದ.

ಇವತ್ತು ಅವನಿಗೆ ಯಾವ ಕೊಳ್ಳಿದೆವ್ವದ ಕಾಟವೂ ಇರಲ್ಲಿ. ಆ ಹುಚ್ಚ ಬಗ್ಗೆ, ಆ ಪಾಳು ಮನೆಯ ಬಗ್ಗೆ ಅವನಿಗೆ ಭಯಾ ಇರಲಿಲ್ಲ. ಅಮ್ಮ ವಿಷಯದಲ್ಲಾದ ನನ್ನ ಈ ಬದಲಾವಣೆಗೆ ರಾತ್ರಿ ನನ್ನ ಕನ್ಸಿನಲ್ಲಿ ಬಂದ ಆ ಹುಚ್ಚನೇ ಕಾರಣ, ಅವನ್ ಕಥೆಯೇ ಕಾರಣ ಅಂತ ಎಲ್ಲೋ ಅವನ ಬಗ್ಗೆ ಮನಸಿನಲ್ಲಿ ಸಣ್ಣ ಗೌರವ ಭಾವನೆ ಮೂಡಿತು.

ಯಾವಾಗಿನಂತೆ ಗೇಟ್ ತೆಕ್ಕೊಂಡು ಒಳಗಡೆ ಹೋದ, ಅಮ್ಮ… ಅಮ್ಮಾ….. ಅಂತ ಬಾಗಿಲು ಬಡಿದ, ಒಳಗಡೆಯಿಂದ ಯಾವ ಉತ್ತರವೂ ಬರಲಿಲ್ಲ….. ಗಾಬರಿಯಾಗಿ ಮತ್ತೆ ಜೋರಾಗಿ ಬಾಗಿಲು ಬಡಿಯೋದಕ್ಕೆ ಶುರುಮಾಡಿದ, ಈಗಲೂ ಯಾವ ಉತ್ತರವೂ ಇಲ್ಲ ಎದೆ ಬಡಿತ ಇಮ್ಮಡಿಯಾಯ್ತು….. ಬೆಳಗೆ ಕೇಳಿದ ಹುಚ್ಚನ ಕಥೆ ನೆನಪಾಯ್ತು. ಬಾಗಿಲು ಬಡಿಯೋದು ನಿಲ್ಲಿಸಿ ಹೆದರಿ ನಿಧಾನಕ್ಕೆ ಹಿಂದಕ್ಕೆ ಬಂದ. ಅಷ್ಟು ಹೊತ್ತಿಗೆ ಅಮ್ಮ ಒಳಗಡೆಯಿಂದ ಬಾಗಿಲು ತೆಗೆದ್ರು…. ಇವನಿಗಂತು ಹೋದ ಜೀವ ವಾಪಾಸ್ ಬಂದಹಾಗಾಯ್ತು. ಬಾಗಿಲು ತೆಗೆದ್ರು ಅಮ್ಮ ನ ಮುಖ ನೋಡಿಕೊಂಡು ಅಲ್ಲೇ ನಿಂತಿದ್ದ.

“ಯಾಕೋ ಅಲ್ಲೇ ನಿಂತಿದಿಯ…. ಬಾರೊ “ ಅಂತ ಹೇಳಿ ಅಮ್ಮ ನಿಧಾನಕ್ಕೆ ಒಳಗಡೆ ಹೋದರು. ಅಳು ಬರೋದನ್ನ ತಡೆದು ಕೊಂಡು ಒಳಗಡೆ ಹೋದ. ಇಷ್ಟೆಲ್ಲಾ ರೇಗಾಡಿ ಜಗಳ ಮಾಡಿ ಹೋದ್ರು.ಅಮ್ಮನಿಗೆ ನನ್ನ ಮೇಲೆ ಏನು ಕೋಪ ಇಲ್ಲಾ ಮಾಮೂಲಿಯಾಗೆ ಮಾತಾಡ್ತಾಳೆ ಅನ್ನೋದು ಅವತ್ತು ಅವನು ಜೀವನದಲ್ಲಿ ಮೊದಲ ಬಾರಿ ಯೋಚನೆ ಮಾಡಿದ್ದ.

“ಅಮ್ಮಾ ನನ್ನ ಕ್ಷಮಿಸ್ತೀಯ?????” ಅಂತ ಬಾಗಿಲಲ್ಲೆ ನಿಂತುಕೊಂಡು ಕೇಳಿದ.

“ಇವತ್ತು ಮಾತ್ರೆ ಮರ್ತು ಬಂದ್ಯ???? ಬಿಡು ನನ್ನ ಮಗ ಏನೋ ಅಂತ ನನಗೆ ಗೊತ್ತಿಲ್ವ” ಅಂತ ಅವರಮ್ಮ ಸಣ್ಣಕ್ಕೆ ನಕ್ಕು ಬಿಟ್ಟ್ರು. ಅದನ್ನ ಕೇಳಿದ ಪಾಣಿಗೆ ಅಳು ತಡೀಲಿಲ್ಲ ಸೀದ ಬಂದು ಅಮ್ಮನನ್ನ ಗಟ್ಟಿಯಾಗಿ ತಬ್ಬಿಕೊಂಡು.

“ ಅಮ್ಮ ನನ್ನ ಕ್ಷಮಿಸಮ್ಮ….. ನಾನು ಯಾವತ್ತು ಹೀಗೆ ಮಾಡಲ್ಲ ಅಮ್ಮ…. ನಿಂಗೆ ನೋವಾಗೊ ಹಾಗೆ ನಡ್ಕೊಳೊಲ್ಲ ಅಮ್ಮ…. ನೀನು ಹೇಳಿದ ಹಾಗೆ ಕೇಳ್ತೆನಮ್ಮ” ಅಂತ ಚಿಕ್ಕ ಮಗೂ ಥರ ಗಳಗಳಾಂತ ಅಳೊಕೆ ಶುರು ಮಾಡಿದ. ಇದ್ದಕಿದ್ದ ಹಾಗೆ ಮಗ ತಬ್ಬಿಕೊಂಡು ಅಳೊದು ನೋಡಿ ಅಮ್ಮನೆಗೆ ಏನಾಗ್ತಾ ಇದೆ ಅಂತ ಅರ್ಥವಾಗಲಿಲ್ಲ.

“ಹೇ….. ಪಾಣಿ ಏನಾಯ್ತು….. ಹೋಗ್ಲಿ ಬಿಡೊ….. ನಂಗೆ ಪರ್ವಾಗಿಲ್ಲ ಕಣೊ ಇವಾಗ….. ಮಾತ್ರೆ ನಾಳೆ ತಂದ್ರು ಸಾಕು….. ಇದಕ್ಕೆಲ್ಲಾ ಅಳ್ತಾರ” ಅಂತ ಅಮ್ಮ ಸಮಾಧಾನ ಮಾಡೊಕೆ ಶುರು ಮಾಡಿದ್ರು. ಅವನಿಗೆ ಇದು ಯಾವುದೂ ಕೇಳ್ತಾನೆ ಇಲ್ಲ.

“ನನ್ ಬಿಟ್ಟು ಹೋಗ್ಬೇಡ ಅಮ್ಮ….. ನಿನ್ಬಿಟ್ಟು ಇರೋಕಾಗಲ್ಲ ಅಮ್ಮ ನನಗೆ” ಅಂತ ಮತ್ತೆ ಅಳು ಮುಂದುವರೆಸಿದ. ಅಮ್ಮನಿಗೆ ಏನು ಹೇಳಬೇಕು ಅಂತ ಗೊತ್ತಾಗ್ಲಿಲ್ಲ, ಮಗ ತಬ್ಬಿಕೊಂಡು ಅಳೊದು ನೋಡಿ ಅವಳಿಗೂ ಕಣ್ಣಲ್ಲಿ ನೀರು ತುಂಭಿಕೊಂಡಿತು.

“ನಿನ್ಬಿಟ್ಟು ನಾನೆಲ್ಲೋ ಹೋಗ್ತೀನಿ….. ನಿನ್ ಬಿಟ್ರೆ ನನಗ್ಯಾರಿದರೋ…. ಅಳೊದು ನಿಲ್ಸು ನೀನು” ಅಂದ್ರು.
ಮೆಲ್ಲಗೆ ಅಳು ನಿಲ್ಲಿಸಿ ಚಕ್ರಪಾಣಿ ಬ್ಯಾಗಿಂದ ಮಾತ್ರೆ ತೆಗೆದು

“ತೆಗೋ ಮೊದ್ಲು ಮಾತ್ರೆ ತೆಗೊ….. ಇವತ್ತು ಮರೀದೆ ತಂದಿದಿನಿ…. ಮೂರು ದಿನದಿಂದ ನೋವು ಅಂತಿದಿಯ…. ನಾನು ಹೀಗ್ ಮಾಡ್ಬಾರ್ದಿತ್ತು…. ಇನ್ನಾಯವ್ತ್ತು ಹೀಗೆ ಮಾಡಲ್ಲ ಅಮ್ಮ….” ಅಂತ ಕಣ್ಣಿರು ಒರೆಸಿಕೊಂಡ.

“ಅದಿಕ್ಕೆ ಇಷ್ಟೆಲ್ಲ ಅಳ್ತಾರ…. ನಿನ್ನ ಹೆರೋವಾಗ ಎಂಥಾ ನೋವು ಅನುಭವಿಸಿಲ್ಲ ನಾನು… ಈ ಬೆನ್ನು ನೋವು ನಂಗೆ ಲೆಕ್ಕಾನ???..... ನಂಗೆ ನನ್ನ ನೋವಿನ ಚಿಂತೆ ಅಲ್ಲಾಪ್ಪಾ….. ಮಾತ್ರೆ ತೆಗೊಳದೆ ನಾಳೆ ನೋವು ಜಾಸ್ತಿಯಾಗಿ ಬೆಳಗ್ಗೆ ಏಳೊಕಾಗದೇ ಇರೋ ಪರಿಸ್ಥಿತಿ ಬಂದ್ರೆ…. ನಿಂಗೆ ಅಡುಗೆ ಮಾಡೊದು ಯಾರೊ??? ಸ್ನಾನಕ್ಕೆ ಬಿಸಿನೀರು ಕಾಯಿಸೋದು ಯಾರು???....ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗೊ ನಿನಗೆ ಏನೂ ತೊಂದರೆ ಆಗಬಾರದು ಅನ್ನೋದು ನನ್ನ ಚಿಂತೆ ಅಷ್ಟೆ”

“ಇಷ್ಟು ವರ್ಷ ನಿಂಗೆ ಎಷ್ಟು ಸರ್ತ್ರಿ ನೋವು ಕೊಟ್ಟಿದಿನಿ, ಎಷ್ಟು ಸಲ ಬಾಯಿಗೆ ಬಂದಹಾಗೆ ಬಯ್ದಿದಿನಿ….. ನನ್ನ ಮೇಲೆ ಸ್ವಲ್ಪಾನು ಕೋಪ ಇಲ್ವೇನಮ್ಮ ನಿನ್ನಗೆ??? ನಾನು ನಿಂಗೆ ತಕ್ಕ ಮಗ ಅಲ್ಲಾ ಅಮ್ಮ ಅಲ್ಲ……”

“ ಏನೊ……. ನೋಡು ತಾಯಿಗೆ ಮಕ್ಕಳ ಮೇಲೆ ಯಾವತ್ತು ಪ್ರೀತಿ ಕಮ್ಮಿಯಾಗಲ್ಲ….. ಅಷ್ಟಕ್ಕೂ ನನ್ನನ್ನ ನನ್ನ ಮಗ ಬಯ್ಯದೆ ಇನ್ನೇನು ಪಕ್ಕದ ಮನೆಯವರ ಮಗ ಬಂದು ಬಯ್ತಾನ???.... ನೀನು ಒಳ್ಳೆ….. ಹೋಗು ಹೋಗಿ ಮುಖ ತೊಳ್ಕೊಂಡು ರೇಡಿಯಾಗು,… ಬೆಳಿಗ್ಗೆನು ಸರಿಯಾಗಿ ತಿಂದಿಲ್ಲ…..ನಿನಗೆ ಇಷ್ಟವಾದ ಪಲ್ಯ ಮಾಡಿದಿನಿ ಊಟ ಮಾಡು ಬಾ….” ಅಂತ ಬರ್ತಾ ಇರೋ ಅಳುವನ್ನ ತಡ್ಕೊಂಡು ಒಳಗಡೆ ಬಂದು, ಮಗ ಎಷ್ಟೊ ವರ್ಷದ ನಂತರ ಚಿಕ್ಕ ಮಗುವಿನ ಥರ ತಬ್ಬಿಕೊಂಡು ಅತ್ತ ಸಂತೊಷಕ್ಕೆ ತಾವು ಮನಸ್ಸು ತುಂಬಾ ಅತ್ತು ಬಿಟ್ಟ್ರು.

ಚಕ್ರಪಾಣಿಗೂ ಕೂಡ ಮನಸಲ್ಲಿ ಇದ್ದದ್ದನೆಲ್ಲಾ ಅಮ್ಮನ ಹತ್ರ ಮಾತಾಡಿ ಮನಃ ಪೂರವಕವಾಗಿ ಕ್ಷಮೆ ಕೇಳಿದ್ರಿಂದ ಮನಸ್ಸು ನಿರಾಳ ಅನ್ನಿಸ್ತು.
***

ಆ ದಿವಸದಿಂದ ಮತ್ಯಾವತ್ತೂ ಚಕ್ರಪಾಣಿ ಅವನ ಅಮ್ಮ ನ ಜೊತೆ ಜಗಳ ಆಡೊದಾಗಲಿ, ಅಮ್ಮನಿಗೆ ಬಯ್ಯೋದಾಗಲಿ ಮಾಡಲಿಲ್ಲ. ಅಮ್ಮನ ಜೊತೆ ಸಂತೋಷವಾಗಿದ್ದ. ಪ್ರತೀ ದಿವಸ ದೇವಸ್ಥಾನದ ಹುಚ್ಚನಿಗೆ ಒಂದು ಪ್ಯಾ ಕ್ ಬನ್ ಕೊಡಿಸ್ತಿದ್ದ, ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸ್ತಿದ್ದ. ಕಾಲ ಕ್ರಮೇಣ ಆ ಹುಚ್ಚನನ್ನ ಮತ್ತೆ ಹೊಸ ಮನುಷ್ಯನನ್ನಾಗಿಸೊ ಯೋಚನೆಯಲ್ಲಿದ್ದಾನೆ.
ಅವತ್ತು ಅವನಿಗೆ ಬಿದ್ದ ಆ ಪಾಳುಮನೆಯ ಕನಸಿಗೆ ಅವನ ಮನಸ್ಸಿನ ಯೋಚನೆಗಳೆ ಕಾರಣ, ಅವತ್ತು ಸಂಜೆ ಅವನು ನೋಡಿದ ಹುಚ್ಚ, ರಾತ್ರಿ ಆ ಪಾಳುಮನೆಯನ್ನ ನೋಡಿ ಹೆದರಿದ್ದು, ಅಮ್ಮನ ಬೆನ್ನು ನೋವು, ಇವೆಲ್ಲವೂ ಸೇರಿ ಕನಸಿನ ಹಾಗೆ ಕಾಡಿತ್ತು ಅಷ್ಟೆ.

ಮುಂದೆ ಯಾವತ್ತೂ ಅವನಿಗೆ ಆ ಹುಚ್ಚ, ಆ ಮನೆ ಕನಸಿನಲ್ಲಿ ಬರಲಿಲ್ಲ. ಆ ದುರ್ಗಾಪರಮೇಶ್ವರಿಯ ಪೂಜೆ ಮಾಡಿ ಕಟ್ಟಿದ ದಾರದಿಂದಲೆ ಕೆಟ್ಟ ಕನಸುಗಳು ಬೀಳುತಿಲ್ಲ ಅಂತ ಅವನು ನಂಬಿದ್ದ.

“ಮನೆಯಲ್ಲಿರುವ ತಾಯಿ ದೇವರ ಸೇವೆಯ ಮುಂದೆ ಮತ್ಯಾವ ದೇವರ ಸೇವೆಯೂ ದೊಡ್ಡದಲ್ಲ”
ಅಲ್ಲವೇ?????

ನೀವು ನಿಮ್ಮ ಅನಿಸಿಕೆಗಳನ್ನ ಕಾಮೆಂಟ್ ಮೂಲಕ ತಿಳಿಸ ಬಹುದು

4 ಕಾಮೆಂಟ್‌ಗಳು:

  1. anna nimma kathe bahala chennagide edarlli bahalashtu naijateyannu navu kanabahudu.
    manoranjan nimage uttamma bavishyavide nivu pbba uttamma kategara anta heluvudakke yavude sandehavilla.
    devaru nimage oleeyadannu madali

    ಪ್ರತ್ಯುತ್ತರಅಳಿಸಿ
  2. good yaar. kathe super. yav book inda kaddu bardiddu... ha ha ha... sory. really tumba chanagide. odi khushi aitu. heege kathe bartha irli....

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಕದ್ದ ಕಥೆ ಅಂತ ಅನ್ನಿಸಿದ್ರೆ.. ನೀನು ಬೇರೆ ಎಲ್ಲಿ ಓದಿದ್ದು ಅಂತ ಹೇಳು... ಮತ್ತೆ ನನ್ನ Life ನಲ್ಲೆ ಬೇರೆ ಕಥೆ ಬರೆಯೊಲ್ಲ.... ಹ ಹ ಹ- Any Way Thanks for Commenting>>>

      ಅಳಿಸಿ